ಬೆಂಗಳೂರು: ರೈತರಿಗಾಗಿಯೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರಳಾಗಿ ಸ್ಪರ್ಧಿಸುವುದಾಗಿ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ತಾವು ಚುನಾವಣೆಗೆ ನಿಲ್ಲುವ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಿದರು. ಈ ವೇಳೆ ಮಾಧ್ಯಮದವರು ಮಂಡ್ಯದಲ್ಲಿ ರೈತರು ಆತ್ಮಹತ್ಯೆಗೆ ಶರಣಾದಾಗ ಎಷ್ಟು ಜನರಿಗೆ ಸುಮಲತಾ ಸಹಾಯ ಮಾಡಿದ್ದಾರೆ, ರೈತರ ಬಗ್ಗೆ ಏನು ಕಾಳಜಿ ತೋರಿದ್ದಾರೆ ಎಂಬ ಪ್ರಶ್ನೆಗಳು ಎದ್ದಿದೆ ಎಂದು ಕೇಳಿದರು.
ಈ ಪ್ರಶ್ನೆಗೆ ಸುಮಲತಾ ಅವರು, ಅಧಿಕಾರದಲ್ಲಿದ್ದಾಗ ಯಾರು ಯಾರು ಏನು ಕಾಳಜಿ ತೋರಿಸುತ್ತಾರೆ ಅನ್ನೋದು ಕೇಳಬೇಕಾಗಿರುವ ಪ್ರಶ್ನೆಯಾಗಿದೆ. ಗೆದ್ದು ಬಂದ ಬಳಿಕ ಈ ಪ್ರಶ್ನೆ ಕೇಳಿದ್ರೆ ಅದಕ್ಕೊಂದು ಅರ್ಥವಿದೆ ಎಂದು ಹೇಳಿದರು.
ಬಳಿಕ ತಮ್ಮ ಮಾತನ್ನು ಮುಂದುವರಿಸಿ, ಅಂಬರೀಶ್ ಇದ್ದಾಗ ಕಾವೇರಿ ನೀರಿನ ಸಮಸ್ಯೆ ಬಂದಾಗ ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಇಂತಹ ಒಂದು ರಾಜಕಾರಣವನ್ನು ಬೇರೇ ಯಾರಾದ್ರೂ ಒಬ್ಬ ರಾಜಕಾರಣಿ ಮಾಡಿದ್ದಾರೆ ಎಂದು ನನಗೆ ತೋರಿಸಿ, ನಾನೇ ಒಪ್ಪಿಕೊಂಡು ಬಿಡುತ್ತೇನೆ. ಹೀಗಾಗಿ ರೈತರ ಪರ ನಾವಿಲ್ಲ ಅನ್ನೋ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ರು.
ಮಾರ್ಚ್ 20ಕ್ಕೆ ನಾಮಪತ್ರ ಸಲ್ಲಿಸುವುದಾಗಿ ಇದೇ ವೇಳೆ ತಿಳಿಸಿದ್ರು. ಒಟ್ಟಿನಲ್ಲಿ ಮಂಡ್ಯ ಕ್ಷೇತ್ರದಲ್ಲಿ ಗಾಂಧಿನಗರ ವರ್ಸಸ್ ಪದ್ಮನಾಭ ನಗರ ಫೈಟ್ ನಡೆಯಲಿದೆ. ಸುಮಲತಾ ಪರ ಸ್ಯಾಂಡಲ್ ವುಡ್ ಬ್ಯಾಟ್ ಬೀಸಲಿದ್ದು, ಯಶ್ ಹಾಗೂ ದರ್ಶನ್ ಜೆಡಿಎಸ್ ಅಭ್ಯರ್ಥಿ ನಿಖಿಲ್ ವಿರುದ್ಧ ಪ್ರಚಾರಕ್ಕಿಳಿಯಲಿದ್ದಾರೆ.