ಬೆಂಗಳೂರು: ಹೈಫೈ ಶಾಲಾ-ಕಾಲೇಜುಗಳಲ್ಲಿ ಓದೋರು ಮಾತ್ರ ಸಾಧನೆ ಮಾಡುತ್ತಾರೆ ಅನ್ನೋದು ಸುಳ್ಳು. ಸರ್ಕಾರಿ ಶಾಲೆ, ಬಿಬಿಎಂಪಿ ಶಾಲೆಯಲ್ಲೂ ಓದಿ ಟಾಪ್ ಆಗಬಹುದು ಅಂತ ಬೆಂಗಳೂರಿನ ವಿದ್ಯಾರ್ಥಿನಿ ಕು. ರಹಮತ್ತುನ್ನಿಸಾ ಸಾಧಿಸಿ ತೋರಿಸಿದ್ದಾರೆ. ಈ ಸಾಧಕಿಗೆ ಸಚಿವ ಸುರೇಶ್ ಕುಮಾರ್ ಶಹಬ್ಬಾಶ್ ಗಿರಿ ಕೊಟ್ಟು ಗೌರವಿಸಿದ್ದಾರೆ.
ಬೆಂಗಳೂರಿನ ಕ್ಲೀವ್ ಲ್ಯಾಂಡ್ ಬಿಬಿಎಂಪಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಹಮತ್ತುನ್ನಿಸಾ ಈ ವರ್ಷ ಬೆಂಗಳೂರು ವಿಶ್ವವಿದ್ಯಾಲಯದಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ. ಬಿಕಾಂ ಪದವಿಯಲ್ಲಿ ಇಡೀ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮೊದಲ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಆರ್ಥಿಕವಾಗಿ ರಹಮತ್ತುನ್ನಿಸಾ ಕುಟುಂಬ ದುರ್ಬಲವಾಗಿದೆ. ಹೀಗಿದ್ದರೂ ಬಡತನ ಆಕೆಯ ಸಾಧನೆಗೆ ಅಡ್ಡಿಯಾಗಿಲ್ಲ. ಮನೆ ಪಾಠ- ಟ್ಯೂಷನ್ ಗೆ ಹೋಗದೆ ಸ್ವಂತ ಶ್ರಮದಿಂದ ಸಾಧನೆ ಮಾಡಿದ್ದಾರೆ.
ಬಿಬಿಎಂಪಿ ಇತಿಹಾದಲ್ಲಿಯೇ ಮೊದಲ ಬಾರಿಗೆ ವಿದ್ಯಾರ್ಥಿಯೊಬ್ಬರು ಮೊದಲ ರ್ಯಾಂಕ್ ಸಾಧನೆ ಮಾಡಿದ್ದಾರೆ. ಹೀಗಾಗಿ ಸಾಧಕಿ ರಹಮತ್ತುನ್ನಿಸಾಗೆ ಖುದ್ದು ಶಿಕ್ಷಣ ಸಚಿವರು ತಮ್ಮ ನಿವಾಸಕ್ಕೆ ಕರೆಸಿ ಸನ್ಮಾನ ಮಾಡಿದ್ದಾರೆ. ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ. ಅಲ್ಲದೆ ಪ್ರಶಂಸನಾ ಪತ್ರ ನೀಡಿದ್ದಾರೆ. ಕಾಲೇಜಿನ ಪ್ರಾಂಶುಪಾಲರನ್ನು ಗೌರವಿಸಿ ಶುಭ ಹಾರೈಸಿದ್ದಾರೆ. ಬಡತನದಲ್ಲೂ ಸಾಧನೆ ಮಾಡಿದ ರಹಮತ್ತುನ್ನಿಸಾ ಸಾಧನೆ ಹೆಣ್ಣುಮಕ್ಕಳಿಗೂ ಮಾದರಿಯಾಗಲಿ.