ಬೆಂಗಳೂರು: ದಿನಾ ಕುಡಿಯೋದು ಮನೆಗೆ ಬಂದು ಗಲಾಟೆ ಮಾಡುವುದು, ಕುಡಿದ ಮತ್ತಲ್ಲಿ ಮನೆಯವರನ್ನೆಲ್ಲಾ ಹೊರಗೆ ಹಾಕುವುದು, ಮಚ್ಚು ತಂದು ಎಲ್ಲರನ್ನೂ ಸಾಯಿಸ್ತೀನಿ ಅಂತ ಬೆದರಿಕೆ ಹಾಕುವುದು. ದಿನಾ ಇದನ್ನೇ ಮಾಡುತ್ತಿದ್ದ ತಂದೆಯ ವರ್ತನೆಗೆ ರೊಚ್ಚಿಗೆದ್ದು ಮಗನೇ ತಂದೆಯನ್ನು ಕೊಂದು ಹಾಕಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ.
ದಿನಾ ಕುಡಿದು ಬರುತ್ತಾ ಇದ್ದ ಚೌಡಪ್ಪ ಮನೆಗೆ ಬಂದು ಹೆಂಡತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡುತ್ತಿದ್ದ. ಯಾವಾಗಲೂ ಅಪ್ಪ ಕುಡಿದು ಅಮ್ಮನಿಗೆ ಹೊಡೆಯುವುದನ್ನು ನೋಡಿ ಬೇಸತ್ತು ಹೋದ ಮಗ ಸುಹಾನ್ ಅಪ್ಪನನ್ನು ಲಟ್ಟಣಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಅಪ್ಪ ಕುಡಿದು ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಿದ್ದಾನೆ. ಕುಡುಕ ಗಂಡನ ನಿತ್ಯನರಕದಿಂದ ಬೇಸತ್ತು ಹೋಗಿದ್ದ ಹೆಂಡತಿ ಕೂಡ ಗಂಡ ಸತ್ತರೆ ಸಾಯಲಿ ಅಂತ ಸುಮ್ಮನಾಗಿದ್ದಾಳೆ. ಆದರೆ ಈ ಬಗ್ಗೆ ಮಾಹಿತಿ ತಿಳಿದ ಸಾರ್ವಜನಿಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಪೊಲೀಸರು ಬಳಿಕ ಚೌಡಪ್ಪನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.