– ಬಿರುಕುಬಿಟ್ಟ ಫ್ಯಾಕ್ಟರಿ ಅಕ್ಕಪಕ್ಕದ ಮನೆಗಳು
ಬೆಂಗಳೂರು: ಬಾಯ್ಲರ್ ಸ್ಫೋಟಗೊಂಡು ಇಬ್ಬರು ವ್ಯಕ್ತಿಗಳು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ದೊಡ್ಡಬಿದರು ಕಲ್ಲಿನಲ್ಲಿ ನಡೆದಿದೆ.
ದೊಡ್ಡ ಬಿದರುಕಲ್ಲಿನ ಅನ್ನಪೂರ್ಣೇಶ್ವರಿ ಲೇ ಔಟ್ ನಲ್ಲಿ ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ದುರ್ದೈವಿಗಳನ್ನು ಶ್ರೀಕಂಠ ಮತ್ತು ರಮೇಶ್ ಎಂದು ಗುರುತಿಸಲಾಗಿದೆ.
ಈ ಫ್ಯಾಕ್ಟರಿ ಮಾಲೀಕ ಸಂತೋಷ್ ಆಗಿದ್ದು, ಟೆಕ್ಸ್ ಟೈಲ್ಸ್ ವಾಶ್ ಮಾಡುವ ಫ್ಯಾಕ್ಟರಿ ಇದಾಗಿದೆ. ಸೆಕೆಂಡ್ ಶಿಫ್ಟ್ ನಲ್ಲಿದ್ದ ಮೂವರು ಫ್ಯಾಕ್ಟರಿ ಒಳಗಡೆ ಕೆಲಸ ಮಾಡುತ್ತಿದ್ದರು. ಬಾಯ್ಲರ್ ವರ್ಕ್ ಮಾಡುತ್ತಿಲ್ಲ ಅಂತ ನೋಡೋದಕ್ಕೆ ಹೋದಾಗ ಇದ್ದಕ್ಕಿದ್ದ ಹಾಗೇ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಫ್ಯಾಕ್ಟರಿ ಫುಲ್ ಛಿದ್ರ ಛಿದ್ರ ಆಗಿ ಫ್ಯಾಕ್ಟರಿಯ ಸೀಟ್ ಎಲ್ಲವೂ ಪೀಸ್ ಪೀಸ್ ಆಗಿ ಎಗರಿ ಹೋಗಿವೆ. ರಭಸದ ಶಬ್ದಕ್ಕೆ ಫ್ಯಾಕ್ಟರಿ ಅಕ್ಕಪಕ್ಕದಲ್ಲಿ ಇದ್ದ ಮನೆಗಳೆಲ್ಲವೂ ಬಿರುಕು ಬಿಟ್ಟಂತೆ ಆಗಿ ಜನರಲ್ಲಿ ಆತಂಕ ಉಂಟು ಮಾಡಿದೆ.
ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಪೊಲೀಸರು ಮತ್ತು ಪೀಣ್ಯ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹಗಳನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು ಟೆಕ್ಸ್ ಟೈಲ್ಸ್ ವಾಶ್ ಮಾಡುವ ಫ್ಯಾಕ್ಟರಿ ಇದು ಬಾಯ್ಲರ್ ವರ್ಕ್ ಮಾಡುತ್ತಿಲ್ಲ ಅಂತ ನೋಡೋದಕ್ಕೆ ಹೋದಂತಹ ಸಂದರ್ಭದಲ್ಲಿ ಘಟನೆ ನಡೆದಿದೆ. ಕಂಠಿ ಮತ್ತೆ ರಮೇಶ್ ಅನ್ನುವ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಮಾಲೀಕ ಸಂತೋಷ್ ನನ್ನು ವಶಕ್ಕೆ ಪಡೆದು ಕೇಸ್ ದಾಖಲು ಮಾಡಿಕೊಂಡಿದ್ದೇವೆ. ಘಟನೆಗೆ ಕಾರಣ ಏನು, ನಿರ್ಲಕ್ಷ್ಯ ಏಕೆ ಅಂತ ತನಿಖೆ ಮಾಡಿ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.