ಬೆಂಗಳೂರು: ಸಮ್ಮಿಶ್ರ ಸರ್ಕಾರ ಉಳಿಸಲು ಅಂದಿನ ಸಚಿವ ಡಿ.ಕೆ.ಶಿವಕುಮಾರ್ ಮುಂಬೈಗೆ ಅಸಮಾಧಾನಿತ ಶಾಸಕರ ಹೋಟೆಲ್ ಮುಂದೆ ನಿಂತು ಶಾಸಕರ ಮನವೊಲಿಕೆಗೆ ಮುಂದಾಗಿದ್ದರು. ಗುರುವಾರ ಅದೇ ರೀತಿಯ ಘಟನೆ ಬೆಂಗಳೂರು ಹೊರ ವಲಯದ ಖಾಸಗಿ ರೆಸಾರ್ಟ್ ಹೊರಭಾಗದಲ್ಲಿ ನಡೆದಿದೆ. ಅಂದು ಡಿಕೆಶಿ ಇದ್ದ ಸ್ಥಾನದಲ್ಲಿ ಇಂದು ಮಧ್ಯಪ್ರದೇಶದ ಶಿಕ್ಷಣ ಸಚಿವ ಜೀತು ಪಟ್ವಾರಿ ಇದ್ದರು.
ಬೆಂಗಳೂರು ಹೊರ ವಲಯದ ರೆಸಾರ್ಟಿನಲ್ಲಿ ಇರುವ ಮಧ್ಯಪ್ರದೇಶದ ಬಂಡಾಯ ಶಾಸಕರ ಮನವೊಲಿಕೆಗೆ ಜೀತು ಪಟ್ವಾರಿ ರೆಸಾರ್ಟ್ ಪ್ರವೇಶಕ್ಕೆ ಮುಂದಾಗಿದ್ದಾರೆ. ಆಗ ಮಧ್ಯ ಪ್ರವೇಶಿಸಿದ ಪೊಲೀಸರು ಜೀತು ಪಟ್ವಾರಿ ಅವರನ್ನು ವಶಕ್ಕೆ ಪಡೆಯಲು ಮುಂದಾದರು. ಆಗ ಪೊಲೀಸರು ಹಾಗೂ ಸಚಿವರ ನಡುವೆ ಜಟಾಪಟಿ ನಡೆದು ನೂಕಾಟ ತಳ್ಳಾಟವೆ ನಡೆದು ಹೋಗಿದೆ. ನಂತರ ಜೀತು ಪಟ್ವಾರಿ ಅವರನ್ನು ವಶಕ್ಕೆ ಪಡೆದ ಚಿಕ್ಕಜಾಲ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ.
ಪೊಲೀಸರು ಮಧ್ಯಪ್ರದೇಶ ಸಚಿವರನ್ನು ಬಿಡುಗಡೆ ಮಾಡಿದ ನಂತರ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಆಗಮಿಸಿದ ಜೀತು ಪಟ್ವಾರಿ ಡಿಕೆಶಿ ಬಳಿ ಎಲ್ಲ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿ. ನಂತರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.