ಬೆಂಗಳೂರು: ಶನಿವಾರ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಸ್ವಾಗತ ಕೋರಲು ಬಂದಿದ್ದ ಅಪರಿಚಿತ ಅಭಿಮಾನಿಗಳ ಮೇಲೆ ದೂರು ದಾಖಲಾಗಿದೆ.
ಡಿಕೆಶಿ ಅಭಿಮಾನಿಗಳು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ನಿಂದಿಸಿದ್ದಾರೆ ಎಂದು ಈಶಾನ್ಯ ವಿಭಾಗ ಡಿಸಿಪಿಯವರ ಗನ್ ಮ್ಯಾನ್ ಭರಮಪ್ಪ ಸುನಾಗರ್ ಅವರು ದೂರು ನೀಡಿದ್ದು, ಐಪಿಸಿ ಸೆಕ್ಷನ್ 353 ರ ಅಡಿ ಡಿಕೆಶಿ ಅಭಿಮಾನಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಡಿಕೆ ಶಿವಕುಮಾರ್ ಬೆಂಗಳೂರಿಗೆ ಬಂದ ದಿನ ಏರ್ ಪೋರ್ಟ್ ಬಳಿ ಜಾಮ್ ಆಗಿತ್ತು. ಈ ವೇಳೆ ಟೋಲ್ ಬಳಿ 15 ಮಂದಿ ಕಾಂಗ್ರೆಸ್ ಬಾವುಟ ಹಿಡಿದು ರಸ್ತೆಯಲ್ಲಿ ನಿಂತಿದ್ದರು. ನಾನು ರಸ್ತೆಯಿಂದ ಪಕ್ಕಕ್ಕೆ ಸರಿಯುವಂತೆ ಸೂಚನೆ ನೀಡಿದೆ. ಆದರೆ ಉದ್ರಿಕ್ತ ಗುಂಪು ನನ್ನ ಮೇಲೆ ಅಟ್ಯಾಕ್ ಮಾಡಿ, ಕೆಟ್ಟ ಪದಗಳಿಂದ ನಿಂದಿಸಿದರು ಎಂದು ಭರಮಪ್ಪ ದೂರು ನೀಡಿದ್ದಾರೆ.
ಇದಲ್ಲದೆ ಫ್ಲೆಕ್ಸ್ ಬ್ಯಾನರ್ ಅಳವಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೂರು ದಾಖಲಾಗಿದೆ. ಹೈ ಕೋರ್ಟ್ ಆದೇಶದಂತೆ ನಗರದಲ್ಲಿ ಫ್ಲೆಕ್ಸ್ ಬ್ಯಾನರ್ ಅಳವಡಿಸುವಂತಿಲ್ಲ. ಆದರೆ ಸಾದಹಳ್ಳಿ ಗೇಟ್ ನಿಂದ ಏರ್ ಪೋರ್ಟ್ ರಸ್ತೆಯಲ್ಲಿ ಡಿಕೆಶಿ ಹಾಗು ಕಾಂಗ್ರೆಸ್ ನಾಯಕರ ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.