– ಸುದ್ದಿಗೋಷ್ಠಿಯಲ್ಲಿ ಸಚಿವ ಸುಧಾಕರ್ ಮಾಹಿತಿ
ಬೆಂಗಳೂರು: ಇಡೀ ದೇಶದಲ್ಲೇ ಅತೀ ಹೆಚ್ಚು ಜನರನ್ನು ನಾವು ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಜನತೆಗೆ ಸರ್ಕಾರದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ನಮ್ಮ ಸರ್ಕಾರದ ಆದೇಶವನ್ನು ಪಾಲಿಸುತ್ತಿರುವುದರಿಂದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇವೆ. ನಾವು ಇಡೀ ದೇಶದಲ್ಲೇ ಹೆಚ್ಚು ಜನರನ್ನು ಸ್ಕ್ರೀನಿಂಗ್ ಮಾಡಿದ್ದೇವೆ. ಇವತ್ತು 92 ಜನರ ಪರೀಕ್ಷೆ ಮಾಡಿದ್ದೇವೆ. ಇವತ್ತು 50 ಜನರರಿಗೆ ನೆಗೆಟಿವ್ ಬಂದಿದೆ. ಒಟ್ಟಾರೆ 6 ಜನಕ್ಕೆ ಸೋಂಕು ಇದೆ ಎಂದು ಹೇಳಿದರು.
ಕರ್ನಾಟಕದಲ್ಲಿ 1,09,132 ಪ್ರಯಾಣಿಕರ ತಪಾಸಣೆ ಮಾಡಲಾಗಿದೆ. ಇಡೀ ದೇಶದಲ್ಲೇ ನಮ್ಮ ರಾಜ್ಯದಲ್ಲಿ ಅತೀ ಹೆಚ್ಚು ಜನರನ್ನು ಪರೀಕ್ಷೆ ಮಾಡಿದ್ದೇವೆ. ಒಟ್ಟು 32 ಜನರನ್ನು ದಾಖಲು ಮಾಡಿಕೊಂಡಿದ್ದೇವೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 77,730 ಪ್ರಯಾಣಿಕರ ತಪಾಸಣೆ ಮಾಡಿದ್ದೇವೆ. ನಂತರ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 27,963 ಪ್ರಯಾಣಿಕರ ತಪಾಸಣೆ ಮಾಡಲಾಗಿದೆ. ಮಂಗಳೂರು ಮತ್ತು ಕಾರವಾರ ಬಂದರುಗಳಲ್ಲಿ 5,439 ಪ್ರಯಾಣಿಕರ ತಪಾಸಣೆ ಮಾಡಲಾಗಿದೆ ಎಂದು ಅಂಕಿಅಂಶಗಳನ್ನು ತಿಳಿಸಿದರು.
ಇವತ್ತಿನಿಂದ ಅನೇಕ ಬದಲಾವಣೆ ಮಾಡಲಾಗಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವವರನ್ನು ಎ,ಬಿ,ಸಿ ಎಂದು ವಿಭಾಗ ಮಾಡಿ ಸ್ಕ್ರೀನಿಂಗ್ ಮಾಡಲಾಗುತ್ತದೆ. ಸೋಂಕಿನ ಲಕ್ಷಣ ಇರೋವವರು ಎ ವಿಭಾಗದಲ್ಲಿ ಸೇರಿಸಲಾಗಿದೆ. ಇವರನ್ನು ನೇರವಾಗಿ ಆಸ್ಪತ್ರೆಗೆ ದಾಖಲು ಮಾಡಿ ತಪಾಸಣೆ ಮಾಡುತ್ತೇವೆ. 60 ವರ್ಷದ ಮೇಲ್ಪಟ್ಟವರು, ಬಿಪಿ, ಶುಗರ್ ಇರುವವರನ್ನು ಬಿ ವಿಭಾಗದಲ್ಲಿ ಸೇರಿಸಲಾಗಿದೆ. ಈ ರೀತಿಯ ರೋಗಿಗಳನ್ನು ಮನೆಯಲ್ಲೇ ಇದ್ದು ತಪಾಸಣೆ ಮಾಡಲಾಗುವುದು. ರೋಗದ ಲಕ್ಷಣ ಇಲ್ಲದವರು ದೇಶದಿಂದ ಬಂದಿರಲ್ಲಿ ಅವರನ್ನು ಸಿ ವರ್ಗಕ್ಕೆ ಸೇರಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಸಹಾಯವಾಣಿ 104ಕ್ಕೆ ಬರುವ ಕರೆಗಳು ಸಂಖ್ಯೆ ಹೆಚ್ಚಾಗಿದೆ. ಜನರು ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಇದರಿಂದ ನಮಗೂ ಮಾಹಿತಿ ಸಂಗ್ರಹ ಮಾಡಿಕೊಳ್ಳೋದಕ್ಕೆ ಸಹಾಯ ಆಗುತ್ತಿದೆ. ಪ್ರವಾಸೋದ್ಯಮ ತಾಣಗಳಲ್ಲೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ರಾಜ್ಯದ ಮೃಗಾಲಯಗಳನ್ನು ಕ್ಲೋಸ್ ಮಾಡುವ ನಿರ್ಧಾರ ಮಾಡಿದ್ದಾರೆ. ಸೋಂಕಿತರ ಈ ಸಂಖ್ಯೆ ಹೆಚ್ಚಾಗದಂತೆ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಗ್ರೀಸ್ನಿಂದ ಬಂದ ದಂಪತಿ ವಿಚಾರವಾಗಿ ಮಾತನಾಡಿದ ಸುಧಾಕರ್, ಗ್ರೀಸ್ನಿಂದ ದಂಪತಿ ಬೆಂಗಳೂರಿಗೆ ಬಂದಿದ್ದು ನಿಜ. ಮಾರ್ಚ್ 8ರ ರಾತ್ರಿ ಬಂದಿದ್ದಾರೆ. ಪತ್ನಿ ಏರ್ ಪೋರ್ಟಿನಲ್ಲೇ ಇರುತ್ತಾರೆ. ಮುಂಬೈನಿಂದ ಬೆಂಗಳೂರಿಗೆ ಡೊಮೆಸ್ಟಿಕ್ ಫ್ಲೈಟ್ನಲ್ಲಿ ಬಂದಿರುತ್ತಾರೆ. ಅವರು ಮತ್ತೆ ಬೆಂಗಳೂರಿನಿಂದ ದೆಹಲಿಗೆ ಹೋಗುತ್ತಾರೆ. ದಂಪತಿ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಕ್ಕೆ ಬಂದಿಲ್ಲ. ಇದನ್ನು ತನಿಖೆ ಮಾಡಿ ದೃಢಪಡಿಸಿಕೊಂಡು ಹೇಳುತ್ತಿದ್ದೇನೆ. ಬೆಂಗಳೂರಿಗೆ 9:41 ಕ್ಕೆ ಬರುತ್ತಾರೆ. ನಂತರ 1 ಗಂಟೆಗೆ ದೆಹಲಿಗೆ ಹೊರಡುತ್ತಾರೆ. ದೆಹಲಿಯಿಂದ ಟ್ರೈನ್ ಮೂಲಕ ಆಗ್ರಾಕ್ಕೆ ತೆರಳಿದ್ದಾರೆ ಎಂದು ತಿಳಿಸಿದರು.
ಕೊರೊನಾ ವೈರಸ್ ತಡೆಗಟ್ಟಲು ಏನೇನು ಕ್ರಮ ತೆಗೆದುಕೊಳ್ಳಬೇಕು ಎಲ್ಲವನ್ನೂ ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಒಂದು ಪ್ರಕರಣದಿಂದ ಇಡೀ ಕಲಬುರಗಿ ಜಿಲ್ಲೆಯನ್ನು ಬಂದ್ ಮಾಡಿಸಲಾಗಿದೆ. ಮಾಧ್ಯಮ ಪ್ರತಿನಿಧಿಗಳನ್ನ ಸಹ ತಪಾಸಣೆ ಮಾಡಿಸಲಾಗಿದೆ ಎಂದು ಕಲಬುರಗಿಯ ಡಿಸಿ ತಿಳಿಸಿದ್ದಾರೆ ಎಂದರು.