ಬೆಂಗಳೂರು: ರಾಜ್ಯ ಕಾಂಗ್ರೆಸ್ಸಿನ ಸ್ಥಿತಿ ನಾವಿಕನಿಲ್ಲದ ದೋಣಿಯಂತೆ ಆಗಿದೆ. ಒಬ್ಬೊಬ್ಬ ನಾಯಕರದ್ದು ಒಂದೊಂದು ದಿಕ್ಕು, ಒಂದೊಂದು ಅಭಿಪ್ರಾಯ ಅನ್ನುವಂತಾಗಿದೆ.
ದೆಹಲಿಯ ಗಲಭೆ ಖಂಡಿಸಿ ಮೌರ್ಯ ಸರ್ಕಲ್ನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲು ಮುಂದಾದ ಕೈ ನಾಯಕರುಗಳು, ಮಾಜಿ ಸಿಎಂ ಸಿದ್ದರಾಮಯ್ಯಗೂ ಆಹ್ವಾನ ನೀಡಿದ್ದರು. ಆದರೆ ಸಂಜೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸಲು ಸಿದ್ದರಾಮಯ್ಯ ಮುಂದಾದರು. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರತಿಭಟನೆಗೆ ಮುಂದಾದ ಸಿದ್ದರಾಮಯ್ಯ ಪ್ರತಿಭಟನೆ ಮಾಡುವುದಾಗಿ ಘೋಷಿಸಿದರು.
ಕಾಂಗ್ರೆಸ್ ನಾಯಕರುಗಳು ದೆಹಲಿ ವಿಚಾರವಾಗಿ ಮೌರ್ಯ ಸರ್ಕಲ್ನಲ್ಲಿ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡರೆ ಯತ್ನಾಳ್ ವಿರುದ್ಧ ವಿಧಾನಸೌಧ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆಗೆ ಸಿದ್ದರಾಮಯ್ಯ ತೀರ್ಮಾನ ಮಾಡಿದ್ದರು. ಎಲ್ಲಿ ಯಾವ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂಬುದೇ ಉಳಿದ ಮುಖಂಡರ ಗೊಂದಲವಾಗಿತ್ತು. ಕೆಪಿಸಿಸಿ ಹಾಗೂ ಬೇರೆ ನಾಯಕರ ಗಮನಕ್ಕೆ ತರದೆ ಸಿದ್ದರಾಮಯ್ಯ ಏಕಾಏಕಿ ಪ್ರತಿಭಟನೆ ಮಾಡುವುದಾಗಿ ಘೋಷಣೆ ಮಾಡಿ, ಕೈ ಪಾಳಯದಲ್ಲಿ ಎಲ್ಲವು ಸರಿ ಇಲ್ಲ ಎಂಬುದನ್ನು ಸಾಬೀತುಪಡಿಸಿದರು.
ಕೊನೆಗೂ ಇದರಲ್ಲಿ ಸಿದ್ದರಾಮಯ್ಯಗೆ ಮೇಲುಗೈಯಾಗಿದೆ. ದೆಹಲಿ ಗಲಭೆ ಸಂಬಂಧದ ಪ್ರತಿಭಟನೆ ಕೈ ಬಿಟ್ಟ ಕಾಂಗ್ರೆಸ್ ನಾಯಕರುಗಳು ಸಂಜೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅನಿವಾರ್ಯವಾಗಿ ಎಲ್ಲರೂ ಭಾಗವಹಿಸಿದರು.