ಬೆಂಗಳೂರು: ಶತಾಯಗತಾಯ ತಮ್ಮ ಬೆಂಬಲಿಗರನ್ನೇ ಕೆಪಿಸಿಸಿ ಪಟ್ಟಕ್ಕೆ ತರಬೇಕು ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಕಡೆ ಗಳಿಗೆವರೆಗೆ ಪ್ರಯತ್ನಿಸಿದ್ದರು. ಅತ್ತ ಮೂಲ ಕಾಂಗ್ರೆಸ್ಸಿಗರು ಸಹ ಯಾವ ಕಾರಣಕ್ಕೂ ಕೆಪಿಸಿಸಿ ಪಟ್ಟ ಸಿದ್ದರಾಮಯ್ಯ ಬಣಕ್ಕೆ ಸಿಗಬಾರದು ಎಂದು ಇನ್ನಿಲ್ಲದ ಲಾಬಿ ಮಾಡಿದ್ದರು.
ಆದರೆ ಮೂಲ ಹಾಗೂ ವಲಸಿಗರಿಬ್ಬರಿಗೆ ಟಾರ್ಗೆಟ್ ಆಗಿದ್ದಿದ್ದು ಡಿ.ಕೆ ಶಿವಕುಮಾರ್. ಆದರೆ ಯಾವಾಗ ಸಿದ್ದರಾಮಯ್ಯ ಬಣದ ಲಾಬಿ ಬಲವಾಗಿ ಕೈ ಮೇಲಾಗಬಹುದು ಎಂಬ ಅನುಮಾನ ಬಲವಾಗುತ್ತಿದ್ದಂತೆ ಮೂಲ ಕಾಂಗ್ರೆಸ್ಸಿಗರು ಯೂಟರ್ನ್ ಹೊಡೆದಿದ್ದಾರೆ.
ಮೂಲ ಕಾಂಗ್ರೆಸ್ಸಿಗರ ಟೀಮ್ ಡಿಕೆಶಿಯನ್ನ ಬೆಂಬಲಿಸಿ ಸಿದ್ದರಾಮಯ್ಯ ಬಣಕ್ಕೆ ಸೆಡ್ಡು ಹೊಡೆದಿದೆ. ಈಗ ಡಿಕೆಶಿಗೆ ಕೆಪಿಸಿಸಿ ಪಟ್ಟಾಭಿಷೇಕ ಬಹುತೇಕ ಖಚಿತವಾಗಿದೆ. ಇದು ಮೂಲ ಕಾಂಗ್ರೆಸ್ಸಿಗರ ಗೆಲುವಾ ಅಥವಾ ಸಿದ್ದರಾಮಯ್ಯ ಬಣದ ಸೋಲಾ ಎಂಬ ಪ್ರಶ್ನೆ ಎದ್ದಿದೆ.
ಇದು ಯಾರ ಸೋಲು, ಯಾರ ಗೆಲುವು ಅನ್ನೋದಕ್ಕಿಂತ ಎರಡು ಬಣದವರ ಸೋಲು ಗೆಲುವಿನ ಕಹಾನಿ ಅನ್ನಬಹುದು. ಮೂಲ ಕಾಂಗ್ರೆಸ್ಸಿಗರು ಡಿಕೆಶಿಗೆ ಬೆಂಬಲಿಸಿ ಸಿದ್ದರಾಮಯ್ಯ ಬಣವನ್ನೇನೋ ಸೋಲಿಸಿದರು. ಆದರೆ ಮೂಲ ಕಾಂಗ್ರೆಸ್ಸಿಗರ ಮೂಲ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಮೂಲ ಕಾಂಗ್ರೆಸ್ಸಿಗರ ವಿರುದ್ಧ ಸಿದ್ದರಾಮಯ್ಯ ಬಣ ಮಂಡಿ ಊರಿದೆ. ಆದರೆ ಮೂಲ ಕಾಂಗ್ರೆಸ್ಸಿನ ಮೂಲ ಬಣದವರಿಗೆ ಅಧಿಕಾರ ತಪ್ಪಿಸಲು ಯಶಸ್ವಿಯಾಗಿದೆ. ಇಬ್ಬರು ಸೋತು ಗೆದ್ದ ಈ ಆಟದಲ್ಲಿ ಇಬ್ಬರಿಗೂ ಬೇಡವಾಗಿದ್ದ ಡಿ.ಕೆ ಶಿವಕುಮಾರ್ ಮಾತ್ರ ಗೆದ್ದು ಮೀಸೆ ತಿರುವಿದ್ದಾರೆ.