ಬೆಂಗಳೂರು: ಅನರ್ಹ ಶಾಸಕರ ತೀರ್ಪು ಬಂದ ದಿನವೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಿವಾಸಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ಕೊಟ್ಟಿದ್ದು, ಇದೀಗ ರಾಜ್ಯ ರಾಜಕಾರಣದಲ್ಲಿ ಹೊಸ ವಿವಾದ ಎಬ್ಬಿಸಿದೆ.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಿಎಂ ಭೇಟಿ ಮಾಡಿದ್ದು ಕ್ಷೇತ್ರದ ಕೆಲಸಕ್ಕೆ ಆಗಿದ್ದರೂ ಅದರ ಹಿಂದೆ ಬೇರೆಯದೇ ಲೆಕ್ಕಾಚಾರ ಇದೆ ಅನ್ನೋ ಅನುಮಾನ ವ್ಯಕ್ತವಾಗಿದೆ. ಅನರ್ಹರ ತೀರ್ಪು ಬಂದಾಗಲೇ ಸಿಎಂ ಭೇಟಿಗೆ ಆಗಮಿಸಿ ರಮೇಶ್ ಜಾರಕಿಹೋಳಿಗೆ ಟಕ್ಕರ್ ಕೊಡುವ ತಂತ್ರಗಾರಿಕೆ ಲಕ್ಷ್ಮಿ ಹೆಬ್ಬಾಳ್ಕರ್ ರದ್ದು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಭೇಟಿ ಮೂಲಕ ನೀವು ಪಕ್ಷ ಬಿಟ್ಟು ಅನರ್ಹರಾಗಿ ಬಿಜೆಪಿ ಸೇರಿದರೂ ಸಿಎಂ ಹಾಗೂ ನನ್ನ ಬಾಂಧವ್ಯ ಹೇಗಿದೆ ಅಂತ ತೋರಿಸಿಕೊಳ್ಳುವ ಪ್ರಯತ್ನ ಎನ್ನಲಾಗುತ್ತಿದೆ. ಅಲ್ಲದೆ ಲಕ್ಷ್ಮಿ ಹೆಬ್ಬಾಳ್ಕರ್ ನಿನ್ನೆಯ ಭೇಟಿ ಒಂದು ಹಂತದಲ್ಲಿ ಸಿಎಂ ಯಡಿಯೂರಪ್ಪರಿಗೆ ಇರಿಸು ಮುರಿಸಾಗಿಸಿದೆ ಎಂಬ ಮತುಗಳು ಕೇಳಿ ಬರುತ್ತಿವೆ. ಇದನ್ನೂ ಓದಿ: ಕುತೂಹಲ ಮೂಡಿಸಿದ ಸಿಎಂ ಬಿಎಸ್ವೈ, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ
ಲಕ್ಷ್ಮಿ ಹೆಬ್ಬಾಳ್ಕರ್ ತಂದಿದ್ದ ಬೇಡಿಕೆಗಳಿಗೆಲ್ಲ ಆಯ್ತು ಮಾಡೋಣ ಎಂದು ಸಿಎಂ ಹೇಳಿದ್ದಾರೆ. ಯಾಕಂದರೆ ಎಲ್ಲಾದರು ಈ ಬೆಳವಣಿಗೆ ರಮೇಶ್ ಜಾರಕಿಹೋಳಿ ಕಣ್ಣು ಕೆಂಪಾಗಿಸಬಹುದು ಎಂದು ಸಿಎಂ ಕೂಡ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬೇಗ ಕಳುಹಿಸಿ ಕೈ ತೊಳೆದುಕೊಂಡಿದ್ದಾರೆ.
ಇತ್ತ ಕಾಂಗ್ರೆಸ್ ಪಾಳಯದಲ್ಲು ಕೂಡ ಇಂತದ್ದೇ ಗುಮಾನಿ ವ್ಯಕ್ತವಾಗುತ್ತಿದೆ. ಕ್ಷೇತ್ರದ ಕೆಲಸವೇ ಇರಬಹುದು ಆದರೆ ಅನರ್ಹ ಶಾಸಕರ ಕುರಿತ ಕೋರ್ಟ್ ತೀರ್ಪಿನಂತಹ ಮಹತ್ವದ ದಿನ ಹೋಗಿದ್ದೇಕೆ. ಆ ನಡೆ ಹಿಂದಿನ ಲೆಕ್ಕಾಚಾರ ಏನು ಅನ್ನೋ ಅಸಮಾಧಾನ ವ್ಯಕ್ತವಾಗುತ್ತಿದೆ.
ಒಟ್ಟಿನಲ್ಲಿ ಚಾಣಕ್ಷ ನಡೆಯ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಿಎಂ ಭೇಟಿ ಕೇವಲ ಕ್ಷೇತ್ರದ ಕೆಲಸಕ್ಕಲ್ಲ. ನಿನ್ನೆಯ ಭೇಟಿ ಉದ್ದೇಶ ಪೂರ್ವಕ ಮತ್ತು ಮಾಜಿ ರಾಜಕೀಯ ಗುರುವಿಗೆ ಹಾಕಿದ ಪರೋಕ್ಷ ಸವಾಲು ಎಂದು ಹೇಳಲಾಗುತ್ತಿದೆ.