– ಬೆಳಗ್ಗೆ ಎಫ್ಐಆರ್ ದಾಖಲಾದರೂ ಬಂಧನ ಮಾಡಿಲ್ಲ ಯಾಕೆ?
– ರಾತ್ರಿ ಸುದ್ದಿಗೋಷ್ಠಿ ನಡೆಸಿ ಬಂಧನಕ್ಕೆ ಸಿಎಂ ಆದೇಶ
ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಆದೇಶದ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಮಾರ್ಕೆಟಿಂಗ್ ಮತ್ತು ಆದಾಯ ವಿಭಾಗದ ಮುಖ್ಯಸ್ಥರಾಗಿರುವ ನಿಖಿಲ್ ಸೋಸಲೆ (Nikhil Sosale) ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವಕೀಲರು ವಾದ ಮಂಡಿಸಿದ್ದಾರೆ.
ಇಂದು ಹೈಕೋರ್ಟ್ನಲ್ಲಿ (High Court) ಪತಿ ನಿಖಿಲ್ ಸೋಸಲೆ ಅಕ್ರಮ ಬಂಧನ ಪ್ರಶ್ನಿಸಿ ಪತ್ನಿ ಮಾಳವಿಕಾ ನಾಯ್ಕ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಕೃಷ್ಣಕುಮಾರ್ ಅವರಿಂದ ಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿದರು.
ವಕೀಲರ ವಾದ ಏನಿತ್ತು?
ಈಗಾಗಲೇ ಸ್ವಯಂ ಪ್ರೇರಿತರಾಗಿ ಹೈಕೋರ್ಟ್ ದೂರು ದಾಖಲಿಸಿದೆ. ಕಾಲ್ತುಳಿತ ಪ್ರಕರಣ ಸಂಬಂಧ ಜೂನ್ 5ರ ಬೆಳಗ್ಗೆ ಕಬ್ಬನ್ ಪಾರ್ಕ್ ಪೊಲೀಸರು (Cubbon Park Police) ಎಫ್ಐಆರ್ ದಾಖಲಿಸುತ್ತಾರೆ. ಎಫ್ಐಆರ್ನಲ್ಲಿ ಯಾರ ಹೆಸರನ್ನು ಉಲ್ಲೇಖಿಸುವುದಿಲ್ಲ. ಇದನ್ನೂ ಓದಿ: ಮುಂಬೈ ವಿಕ್ಟರಿ ಪರೇಡ್ ಉಲ್ಲೇಖಿಸಿ ಕಾಲ್ತುಳಿತಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದ ಡಿಎನ್ಎ
ಆಂಧ್ರಪ್ರದೇಶದಲ್ಲಿ ದೇವಸ್ಥಾನದ ಗೋಡೆ ಕುಸಿದು ಕಾಲ್ತುಳಿತವಾಗಿತ್ತು. ನ್ಯಾಯಾಂಗ ತನಿಖೆ ನಡೆಸಿ ಕಾರಣ ತಿಳಿಯಲಾಗಿತ್ತು. ನಂತರ ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಈ ಕೇಸ್ ನಲ್ಲಿ ಘಟನೆಯ ಮರುದಿನವೇ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪಿಐಎಲ್ ದಾಖಲಿಸಿಕೊಂಡ ಬಳಿಕ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಡಿಎನ್ಎ, ಆರ್ಸಿಬಿ, ಕೆಎಸ್ಸಿಎ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಇಡೀ ಘಟನೆಗೆ ಈ ಮೂರು ಸಂಸ್ಥೆಗಳ ವೈಫಲ್ಯ ಆರೋಪಿಸಿ ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ.
ಜೂನ್ 5 ರ ಮಧ್ಯಾಹ್ನ 2:30ಕ್ಕೆ ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗುತ್ತದೆ. ರಾತ್ರಿ ಸಿದ್ದರಾಮಯ್ಯನವರು ಸುದ್ದಿಗೋಷ್ಠಿ ನಡೆಸಿದ ಬಳಿಕ ಆರೋಪಿಗಳನ್ನು ಬಂಧನ ಮಾಡುವಂತೆ ಸೂಚಿಸುತ್ತಾರೆ. ಈ ಆದೇಶದ ನಂತರ ಸಿಐಡಿಯವರು ಜೂನ್ 6ರ ಬೆಳಗ್ಗೆ4:30ಕ್ಕೆ ಬಂಧನ ಮಾಡಿ ಕಬ್ಬನ್ ಪಾರ್ಕ್ ಪೊಲೀಸರಿಗೆ ಒಪ್ಪಿಸುತ್ತಾರೆ. ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬಂಧನ ಮಾಡಿದ್ದು ಹೇಗೆ? ಇದು ಸಿಐಡಿಗೆ ವರ್ಗಾವಣೆಯಾದ ಪ್ರಕರಣ ಎಂದು ಹೇಳುತ್ತಾರೆ. ಆದರೆ ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರಿಗೆ ಒಪ್ಪಿಸಿದ್ದರಿಂದ ಪ್ರಕರಣ ಇನ್ನೂ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಇದೆ ಎಂದೇ ಭಾವಿಸಬೇಕಾಗುತ್ತದೆ.
ಬಂಧನ ಮೆಮೊ, ಸೂಚನೆ, ಬಂಧನಕ್ಕೆ ಕಾರಣಗಳನ್ನು ನೀಡದೇ ಸಿಸಿಬಿ ಸೋಸಲೆ ಅವರನ್ನು ಬಂಧಿಸಿದೆ. ಬೆಳಗ್ಗೆ ಪ್ರಕರಣ ದಾಖಲಾದ ನಂತರ ರಾತ್ರಿಯವರೆಗೆ ಬಂಧನ ಮಾಡದ ಪೊಲೀಸರು ಸಿದ್ದರಾಮಯ್ಯನವರ ಆದೇಶದ ನಂತರವೇ ಬಂಧನ ಮಾಡಿದ್ದಾರೆ. ಕಾನೂನಿನಡಿಯಲ್ಲಿ ಕಡ್ಡಾಯವಾಗಿ ನೀಡಬೇಕಾದ ಯಾವುದೇ ದಾಖಲೆಯನ್ನು ನೀಡದಿದ್ದರೆ, ಬಂಧನವು ಕಾನೂನುಬಾಹಿರ. ಡಿಕೆ ಬಸು ಅವರ ಪ್ರಕರಣದ ಪ್ರಕಾರ ನಿಖಿಲ್ ಸೋಸಲೆ ಬಂಧನ ಕಾನೂನು ಬಾಹಿರ. ಇದನ್ನೂ ಓದಿ: ಸರ್ಕಾರದ ವೈಫಲ್ಯದಿಂದ ಕಾಲ್ತುಳಿತ, ಪತಿ ಯಾವುದೇ ತಪ್ಪು ಮಾಡಿಲ್ಲ: ಕೋರ್ಟ್ ಮೊರೆ ಹೋದ ನಿಖಿಲ್ ಸೋಸಲೆ ಪತ್ನಿ
ಸೋಸಲೆಯನ್ನು ಬಂಧಿಸಲೆಂದೇ ವಿಮಾನ ನಿಲ್ದಾಣಕ್ಕೆ ಪೊಲೀಸರು ಬಂದಿದ್ದರು. ಬಂಧನ ಮಾಡುವಾಗ ಜೊತೆಯಲ್ಲಿ ಪತ್ನಿ ಮತ್ತು 2 ವರ್ಷದ ಮಗು ಇತ್ತು. ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸುವ ಮೊದಲೇ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಮಾತ್ರ ಬಂಧನ ಮಾಡಲಾಗಿದೆ. ಇದು ಸಂವಿಧಾನದ 21ನೇ ವಿಧಿಯ ಸ್ಪಷ್ಟವಾದ ಉಲ್ಲಂಘನೆ.
ತನಿಖಾಧಿಕಾರಿಯೇ ಬಂಧನವನ್ನು ನಿರ್ಧರಿಸಬೇಕು ಹೊರತು ಇಲ್ಲಿ ಯಾರೂ ಮಧ್ಯಪ್ರದೇಶ ಮಾಡುವಂತಿಲ್ಲ. ಮುಖ್ಯಮಂತ್ರಿಗಳು ತನಿಖೆ ಮಾಡಿ ಎಂದು ಹೇಳಬಹುದಿತ್ತು. ತನಿಖಾಧಿಕಾರಿ ಹೊರತುಪಡಿಸಿ ಬೇರೆ ಯಾರೂ ‘ಬಂಧನ‘ ಪದವನ್ನು ಬಳಸುವಂತಿಲ್ಲ. ಈ ಸಂಬಂಧ ಸುಪ್ರೀಂಕೋರ್ಟ್ನಿಂದ ಸ್ಪಷ್ಟವಾದ ನಿರ್ದೇಶನವಿದೆ ಎಂದು ಹೇಳಿದರು.
ವಕೀಲ ಸಂದೇಶ್ ಚೌಟ ವಾದ ಮಂಡನೆ ಮಾಡುವಾಗ ಅಡ್ವೋಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಹಲವಾರು ಬಾರಿ ಪ್ರಬಲವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಜಡ್ಜ್ ಅನುಮತಿ ನೀಡದೇ ಈಗ ಇವರು ವಾದ ಮಂಡಿಸಲಿ. ಇವರ ವಾದ ಮಗಿದ ಬಳಿಕ ವಾದ ಮಾಡಿ ಎಂದು ಸೂಚಿಸಿದರು.
ಕೊನೆಯಲ್ಲಿ ನ್ಯಾ. ಕೃಷ್ಣಕುಮಾರ್ ಅವರು ಸಿಎಂ ಪತ್ರಿಕಾಗೋಷ್ಠಿಯಲ್ಲಿ ಆರೋಪಿಗಳನ್ನು ಬಂಧಿಸಬೇಕು ಎಂದು ಹೇಳಿದ್ದಾರಾ? ಅವರು ‘ಆರೋಪಿ’ ಎಂಬ ಪದ ಬಳಸಿದ್ದಾರೆಯೇ ಎಂದು ಎಜಿಗೆ ಪ್ರಶ್ನಿಸಿದರು. ಈ ಪ್ರಶ್ನೆಗೆ ಎಜಿ, ನಾನು ಪರಿಶೀಲಿಸಿ ತಿಳಿಸುತ್ತೇನೆ ಎಂದು ಉತ್ತರಿಸಿದರು.
ನಂತರ ಜಡ್ಜ್ ಸಿಸಿಬಿ ಬಂಧನ ಮಾಡಿದ್ಯಾ? ಬಂಧನ ಮಾಡಿದ್ದರೆ ಯಾವ ಅಧಿಕಾರದ ಅಡಿಯಲ್ಲಿ ಬಂಧಿಸಿದೆ ಎಂದು ಪ್ರಶ್ನಿಸಿ ಮುಂದಿನ ವಿಚಾರಣೆಯನ್ನು ಮಂಗಳವಾರ ಬೆಳಗ್ಗೆ 10:30ಕ್ಕೆ ಮುಂದೂಡಿದರು.