– ವಿಧಾನಸೌಧ ಕಾರ್ಯಕ್ರಮಕ್ಕೆ ಆಯುಕ್ತರು ಅನುಮತಿ ಕೊಟ್ಟಿರಲಿಲ್ಲ
– ತೀಟೆ ತೀರಿಸಿಕೊಳ್ಳಲು ಹೋಗಿ ಅಮಾಯಕರು ಬಲಿ
– ಕಾಲ್ತುಳಿತಕ್ಕೆ ಸರ್ಕಾರವೇ ಕಾರಣ
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತಕ್ಕೆ (Chinnaswamy Stadium Stampede Case) ಸರ್ಕಾರವೇ ನೇರ ಹೊಣೆ ಹೊರಬೇಕು. ಸರ್ಕಾರ ಅನುಮತಿ ನೀಡಿ ಈಗ ಅಧಿಕಾರಿಗಳ ಮೇಲೆ ಎತ್ತಿ ಹಾಕುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.
ನಗರ ಖಾಸಗಿ ಹೋಟೆಲಿನಲ್ಲಿ ಇಂದು ಎಚ್ಡಿ ಕುಮಾರಸ್ವಾಮಿ, ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಕುಮಾರಸ್ವಾಮಿ ಹೇಳಿದ್ದೇನು?
ಆರ್ಸಿಬಿ ಗೆದ್ದರೆ ಜೂನ್ 4 ರಂದು ಸನ್ಮಾನ ಮಾಡಬೇಕು. ಅದಕ್ಕೆ ಅನುಮತಿ ನೀಡಬೇಕು ಎಂದು ಕೆಎಸ್ಸಿಎ (KSCA) ಜೂನ್ 3 ರಂದೇ ಕೇಳಿದ ಎಂಬ ವಿಚಾರ ಎಫ್ಐಆರ್ನಲ್ಲಿ ಇದೆ. ತಂಡಕ್ಕೆ ಸನ್ಮಾನ ಮಾಡಲು ವಿಧಾನಸೌಧದಲ್ಲಿ (Vidhansoudha) ಅನುಮತಿ ಕೊಡಿ ಕೆಎಸ್ಸಿಎ ಡಿಪಿಎಆರ್ಗೆ ಮನವಿ ಮಾಡಿತ್ತು. ಅಂದರೆ ಎರಡು ಕಡೆ ಕಾರ್ಯಕ್ರಮ ಮೊದಲೇ ನಿರ್ಧಾರವಾಗಿತ್ತು ಎನ್ನುವುದು ದೃಢಪಡುತ್ತದೆ.
“ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದಂತೆ!”
ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಇಬ್ಬರೂ ವಿಧಾನಸೌಧದ ಕಾರ್ಯಕ್ರಮ ನಾವೂ ಮಾಡಿದ್ದು, ಚಿನ್ನಸ್ವಾಮಿಯಲ್ಲಿ KSCA ಹಾಗೂ RCB ಅವರು ಮಾಡಿದ್ದರು ಅದು ನಮ್ಮ ಗಮನಕ್ಕೆ ಇರಲಿಲ್ಲ ಎಂದು ಹೇಳಿರುವುದು “ಹಸಿ ಸುಳ್ಳು”.
KSCA ನೇ DPAR ಕಾಯರ್ದರ್ಶಿಗೆ ಬರೆದ ಪತ್ರದಲ್ಲಿ ವಿಧಾನಸೌಧ… pic.twitter.com/iYMd71zIsZ
— Nikhil Kumar (@Nikhil_Kumar_k) June 6, 2025
ಜೂನ್ 4 ರಂದು ಸಿಎಂ (CM Siddaramaiah) ಅವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಅವರು ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ವಿಧಾನಸೌಧದ ಕಾರ್ಯಕ್ರಮಕ್ಕೆ ಭದ್ರತೆ ನೀಡಬೇಕು ಎಂದು ಒತ್ತಡ ಹಾಕುತ್ತಾರೆ. ಇದಕ್ಕೆ ಆಯುಕ್ತರು, ಬೆಳಗ್ಗೆಯವರೆಗೆ ಪೊಲೀಸರು ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ. ಎರಡು ಮೂರು ಕಡೆ ಕಾರ್ಯಕ್ರಮ ಮಾಡಿದರೆ ಭದ್ರತೆ ನೀಡಲು ಕಷ್ಟವಾಗುತ್ತದೆ. ಒಂದು ಕಡೆ ಕಾರ್ಯಕ್ರಮ ಮಾಡಿ. ವಿಧಾನಸೌಧದ ಕಾರ್ಯಕ್ರಮಕ್ಕೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಆಯುಕ್ತರ ಪ್ರತಿಕ್ರಿಯೆ ಬಳಿಕ ಗೋವಿಂದರಾಜ್ ಅವರು ಸಿಎಂ ಬಳಿಗೆ ಹೋಗುತ್ತಾರೆ. ಸಿಎಂ ಅವರು ಆಯುಕ್ತರನ್ನು ಕರೆಸಿ ನಾನು ಈ ರಾಜ್ಯದ ಸಿಎಂ. ಆದೇಶ ಮಾಡುತ್ತಿದ್ದೇನೆ ಭದ್ರತೆ ಕೊಡಿ ಎಂದು ಸೂಚಿಸುತ್ತಾರೆ. ಅನಿವಾರ್ಯವಾಗಿ ಪೊಲೀಸ್ ಕಮಿಷನರ್ ವಿಧಾನಸೌಧಕ್ಕೆ ಬಿಗಿ ಭದ್ರತೆ ಹಾಕ್ತಾರೆ. ಆದರೆ ಯಾರಿಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಸೂಚನೆ ಕೊಟ್ಟಿರುವುದಿಲ್ಲ. ಕಾಟಾಚಾರಕ್ಕೆ ಮೂರ್ನಾಲ್ಕು ತುಕಡಿ ಭದ್ರತೆ ಹಾಕಿರುತ್ತಾರೆ. ವಿಧಾನಸೌಧದಲ್ಲೇ ಕಾರ್ಯಕ್ರಮ ಮಾಡಬೇಕು, ನಾನು ಚಿನ್ನಸ್ವಾಮಿಗೆ ಹೋಗುವುದಿಲ್ಲ ಎಂದು ಸಿಎಂ ಹೇಳಿದ್ದರಿಂದ ಹೆಚ್ಚಿನ ಸಂಖ್ಯೆ ಪೊಲೀಸರನ್ನು ನಿಯೋಜಿಸಲಾಗುತ್ತದೆ.
ಇದು ಒಂದು ಭಾಗವಾದರೆ ಇನ್ನೊಂದು ಭಾಗ ಕನಕಪುರದ ಡಿಸಿಎಂ ಅವರದ್ದು. ಅವರು ಕನಕಪುರದ ಯಾವುದೋ ಕೇಸ್ ಸಂಬಂಧ ಕೋರ್ಟ್ಗೆ ಹಾಜರಾಗಿರುತ್ತಾರೆ. ಈ ವೇಳೆ ಫೋನ್ ಮಾಡಿ ಒಬ್ಬರು ಡಿಸಿಎಂ ಅವರ ಗಮನಕ್ಕೆ ವಿಧಾನಸೌಧದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುತ್ತಾರೆ. ಆಗ ಡಿಸಿಎಂ ಕೋರ್ಟ್ನಿಂದಲೇ ನೇರವಾಗಿ ಹೆಚ್ಎಎಲ್ಗೆ ಹೋಗಿ ತಂಡಕ್ಕೆ ಸನ್ಮಾನ ಮಾಡುತ್ತಾರೆ. ಅಲ್ಲಿಂದ ಇವರೇ ಆರ್ಸಿಬಿ ಧ್ವಜ ಹಿಡಿದುಕೊಂಡು ನಾನೇ ಗೆಲ್ಲಿಸಿ ಬಂದವರ ಹಾಗೆ ಪೋಸ್ಟ್ ಕೊಟ್ಟುಕೊಂಡು ಬರುತ್ತಾರೆ.
ವಿಧಾನಸೌಧದಲ್ಲಿ ಶಾಲು ಮೈಸೂರು ಪೇಟಾ ಇಲ್ಲದೇ ಸನ್ಮಾನ ಮಾಡಿದ್ದಾರೆ. ಕೊನೆಗೆ ಶಾಲು ಇಲ್ಲ ಅಂತ ಪರದಾಡಿ ಅದೇನೋ ಶಾಲು ತಂದು ಬೇಕಾಬಿಟ್ಟಿ ಹಾಕಿದ್ದಾರೆ. ಒಬ್ಬ ಶಾಸಕರನ್ನ ಕತ್ತಿಗೆ ಹಾಕಿ ಡಿಸಿಎಂ ಎಳೆಯುವ ಮೂಲಕ ಭದ್ರತಾ ಕೆಲಸ ಸಹ ಮಾಡುತ್ತಾರೆ. ಈ ಕಾರ್ಯಕ್ರಮ ನಡೆಯುವಾಗಲೇ ಅಭಿಮಾನಿಗಳು ಮೃತಪಟ್ಟ ಸುದ್ದಿ ಬರುತ್ತದೆ. ಆಗಲಾದರೂ ಕಾರ್ಯಕ್ರಮ ಮುಂದೂಡುವ ಯೋಚನೆ ಮಾಡಬೇಕಿತ್ತು. 3-4 ಗಂಟೆ ಹೊತ್ತಿಗೆ ಸಾವಿನ ಸುದ್ದಿ ಬಂದರೂ 6 ಗಂಟೆವರೆಗೆ ಕಾರ್ಯಕ್ರಮ ಮಾಡಿದ್ದಾರೆ. ನಂತರ ಕ್ರೀಡಾಂಗಣಕ್ಕೂ ಹೋಗಿ ಟ್ರೋಫಿಗೆ ಮುತ್ತು ಕೊಟ್ಟು ಬಂದಿದ್ದಾರೆ.
ಎರಡು ಕಡೆ ಕಾರ್ಯಕ್ರಮಕ್ಕೆ ಯಾರ ಅನುಮತಿ ಇತ್ತು? ಅಭಿಮಾನಗಳ ಜೀವದ ಜೊತೆ ಸರ್ಕಾರ ಚೆಲ್ಲಾಟ ಆಡಿದೆ. ಇಷ್ಟೆಲ್ಲ ಸಾವು ನೋವಾದರೂ ಸಂಜೆ ಸಿಎಂ ಮೊಮ್ಮಗನ ಜತೆ ಜನಾರ್ದನ ಹೊಟೇಲಿಗೆ ಮಸಾಲೆ ದೋಸೆ ಸವಿಯಲು ಹೋಗಿದ್ದಾರೆ. ಇದು ಸಿಎಂ ಅವರ ಸತ್ಯಮೇವ ಜಯತೆ. ರಾಜ್ಯ ಸರ್ಕಾರಕ್ಕೆ ಮಾನಮರ್ಯಾದೆ ಇದೆಯಾ? ನಿಮ್ಮ ನಿಮ್ಮ ತೀಟೆ ತೀರಿಸಿಕೊಳ್ಳಲು ಅಮಾಯಕರನ್ನು ಬಲಿಕೊಟ್ಟು ಅಧಿಕಾರಿಗಳನ್ನು ಅಮಾನತು ಮಾಡಿದ್ದೀರಿ ಎಂದು ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು.