ಬೆಂಗಳೂರು: ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಎಂ. ಚಿದಾನಂದಮೂರ್ತಿಯವರ ಹೆಸರನ್ನು ಆರ್ಪಿಸಿ ಲೇಔಟ್ ನಲ್ಲಿರುವ ಲೈಬ್ರರಿಗೆ ಇಡುವ ಚಿಂತನೆಯನ್ನು ಸರ್ಕಾರ ಮಾಡಿದೆ.
ಶನಿವಾರ ಸಂಜೆ ಬಿಎಸ್ ಯಡಿಯೂರಪ್ಪ ಅವರು ಚಿ.ಮೂ ಅಂತಿಮ ದರ್ಶನ ಪಡೆದ ಸಮಯದಲ್ಲಿ ಸ್ಥಳೀಯರು ಸಿಎಂ ಜೊತೆ ಮಾತಾನಾಡಿ ಚಿದಾನಂದಮೂರ್ತಿ ಅವರ ಕೆಲಸ- ಕಾರ್ಯಗಳನ್ನ ನೆನಪಿಸಿದ್ರು. ಜೊತೆಗೆ ಚಿದಾನಂದಮೂರ್ತಿ ಅವರ ಹೆಸರನ್ನ ಲೈಬ್ರರಿಗೆ ಇಡಬೇಕು ಎಂದು ಮೌಖಿಕವಾಗಿ ಮನವಿ ಮಾಡಿದರು.
ಈ ವೇಳೆ ಸಿಎಂ ಅವರು ಕೂಡ ಸ್ಥಳೀಯರ ಮನವಿಗೆ ಸ್ಪಂದಿಸಿದ್ದು, ಸ್ಥಳೀಯ ಶಾಸಕರು ಹಾಗೂ ಸಚಿವರಾಗಿರೋ ವಿ.ಸೋಮಣ್ಣ ಜೊತೆ ಮಾತಾನಾಡಿ ಆಯ್ತು ಚಿದಾನಂದಮೂರ್ತಿ ಅವರ ಹೆಸರನ್ನ ಲೈಬ್ರರಿಗೆ ನಾಮಕಾರಣ ಮಾಡುವ ಚಿಂತನೆ ಮಾಡುತ್ತೇವೆ ಎಂದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಚಿದಾನಂದಮೂರ್ತಿ ಅವರು ಶನಿವಾರ ವಿಧಿವಶರಾಗಿದ್ದರು. ಚಿಮೂ ಮೃತದೇಹದ ಅಂತಿಮ ದರ್ಶನದ ವ್ಯವಸ್ಥೆಯನ್ನ ಅವರ ನಿವಾಸ ಮಿಂಚುವಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ಅನೇಕ ಗಣ್ಯ ಸಾಹಿತಿಗಳು ವಿದ್ಯಾರ್ಥಿಗಳು ಚಿಮೂ ಅವರ ಅಂತಿಮ ದರ್ಶನ ಪಡೆದು ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಶ್ರದ್ಧಾಂಜಲಿ ಅರ್ಪಿಸಿದ್ದರು.
ಇಂದು ಸುಮನಹಳ್ಳಿಯಲ್ಲಿರೋ ವಿದ್ಯುತ್ ಚಿತಾಗಾರದಲ್ಲಿ ಯಾವುದೇ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡದೇ ಅಂತ್ಯಕ್ರಿಯೆ ನರವೇರಿಸಲಾಯಿತು.