ಬೆಂಗಳೂರು: ಮಾಜಿ ಸಚಿವ ಬಾಬುರಾವ್ ಚಿಂಚನಸೂರಿಗೆ 11 ಕೋಟಿ ರೂ. ಸಾಲ ನೀಡಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಂಜನಾ ವಿ ಶಾಂತವೀರ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಚಂದ್ರಲೇಔಟ್ ನ ತಮ್ಮ ನಿವಾಸದಲ್ಲಿ ಸಾವಿಗೆ ಶರಣಾಗಿದ್ದಾರೆ. ಮಗನಿಗೆ ದೂರವಾಣಿ ಕರೆ ಮಾಡಿದ ಅಂಜನಾ, ನಾನು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದೇನೆ ಎಂದು ಹೇಳಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಂಜನಾ ಅವರು ಬಾಬುರಾವ್ ಚಿಂಚನಸೂರಿಗೆ 11 ಕೋಟಿ ರೂ. ಸಾಲ ನೀಡಿದ್ದರು. ಬಳಿಕ ಅಂಜನಾ ಈ ವಿಚಾರವಾಗಿ ದೊಡ್ಡ ಗಲಾಟೆ ಮಾಡಿಕೊಂಡಿದ್ದು, ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಹಣಕಾಸಿನ ವಿಚಾರ ಇನ್ನೂ ಇತ್ಯರ್ಥ ಆಗಿರಲಿಲ್ಲ. ಹೀಗಾಗಿ ಅಂಜನಾ ಪದೇ ಪದೇ ಕೋರ್ಟಿಗೆ ಹಾಜರಾಗುತ್ತಿದ್ದರು. ಆದರೂ ಪ್ರಕರಣ ಇತ್ಯರ್ಥವಾಗಿರಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗುತ್ತಿದೆ.
ಗುರುವಾರ ರಾತ್ರಿ ಅಂಜನಾ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಅಂಜನಾ ಮಗ ವೈಯಕ್ತಿಕ ಕಾರಣಗಳಿಂದ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಚಂದ್ರಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಶುಕ್ರವಾರವೇ ಅಂಜನಾ ಅಂತ್ಯಕ್ರಿಯೆ ನಡೆದಿದೆ.