ಬೆಂಗಳೂರು: ಇಂದು ನಗರದಲ್ಲಿ ಬಿಎಂಟಿಸಿ ಬಸ್ ಇರುತ್ತಾ ಇಲ್ವಾ, ಸಾರಿಗೆ ನೌಕರರ ಬೆಂಗಳೂರು ಚಲೋ ರ್ಯಾಲಿಯಿಂದಾಗಿ ಹೀಗೊಂದು ಪ್ರಶ್ನೆ ಮೂಡಿದೆ. ಸಾರಿಗೆ ಸಚಿವರ ವಿರುದ್ಧ ಸಮರ ಸಾರಿರರುವ ನೌಕರರು ಇಂದು ಬೀದಿಗಿಳಿಯಲಿದ್ದಾರೆ.
ಇಂದು ಬಿಎಂಟಿಸಿ, ಕೆಎಸ್ಆರ್ ಟಿಸಿ ಸೇರಿದಂತೆ ಸರ್ಕಾರಿ ಸಾರಿಗೆ ವ್ಯವಸ್ಥೆಯ ಸೇವೆಯಲ್ಲಿ ಕೊಂಚ ವ್ಯತ್ಯಯವಾಗುವ ಸಾಧ್ಯತೆ ಇದೆ. ಏಕೆಂದರೆ ಇಂದು ನಾಲ್ಕು ಸಾರಿಗೆ ನಿಗಮದ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಬೆಂಗಳೂರು ಚಲೋ ನಡೆಸಲಿದ್ದು ಬೀದಿಗಿಳಿಯಲಿದ್ದಾರೆ. ಸಾರಿಗೆ ಕಾರ್ಮಿಕ ಸಂಘಟನೆ ಸಿಐಟಿಯು ಉಪಾಧ್ಯಕ್ಷ ಅನಂತ ಸುಬ್ಬರಾವ್ ಈ ಬೆಂಗಳೂರು ಚಲೋಗೆ ಕರೆಕೊಟ್ಟಿದ್ದು, ಸಾರಿಗೆ ಸಚಿವರ ವಿರುದ್ಧ ಈ ವಾರ್ ಎಂದಿದ್ದಾರೆ. ಹಾಗಿದ್ರೆ ಈ ರ್ಯಾಲಿಗೆ ಏನ್ ಕಾರಣ, ಎಷ್ಟು ಜನ ನೌಕರರು ಭಾಗಿಯಾಗಲಿದ್ದಾರೆ ಜನ್ರಿಗೇನು ಸಮಸ್ಯೆಯಾಗಲಿದೆ ಎನ್ನವುದು ನೋಡೋದಾದರೆ.
ಸಾರಿಗೆ ಸಚಿವರ ವಿರುದ್ಧ ನೌಕರರ ಕೋಪ ಯಾಕೆ;
1. ಸಾರಿಗೆ ನಿಗಮ ನಷ್ಟದ ಹಾದಿಯಲ್ಲಿದೆ. ಇದು ಉದ್ದೇಶಪೂರ್ವಕ, ಸಾರಿಗೆ ನಿಗಮವನ್ನು ನಷ್ಟದ ನೆಪವೊಡ್ಡಿ ಖಾಸಗೀಕರಣ ಮಾಡಲಿದ್ದಾರೆ.
2. ಸಾರಿಗೆ ನೌಕರರಿಗೆ ಡಿಸಿ ತಮ್ಮಣ್ಣ ಬಂದ ಬಳಿಕ ಸರಿಯಾದ ವೇತನ ಸಿಗುತ್ತಿಲ್ಲ, ಪಿಎಫ್ ದುಡ್ಡು, ಇನ್ಸೂರೆನ್ಸ್ ಹಣ ಪಾವತಿ ಮಾಡುತ್ತಿಲ್ಲ. ನೌಕರರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ನಿಗದಿತ ಸಂದರ್ಭದಲ್ಲಿ ವೇತನ ಪಾವತಿಸಬೇಕು ಎನ್ನುವುದು ಬೇಡಿಕೆ.
3. ಡಿಸಿ ತಮ್ಮಣ್ಣ ಎಂದ್ರೆ ‘ಡೈರೆಕ್ಟ್ ಕಲೆಕ್ಷನ್’ ಅಂತಾ. ಸಿಎಂ ಸಂಬಂಧಿಯಾಗಿರೋದ್ರಿಂದ ಅವರು ಇದರ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ನಿಗಮದ ಕಾರ್ಮಿಕ ಸಂಘಟನೆಗಳ ಆರೋಪ
4. ಸಾರಿಗೆ ನಿಗಮ ಕೋಟಿ ಕೋಟಿ ಲೆಕ್ಕದಲ್ಲಿ ನಷ್ಟದಲ್ಲಿದೆ. ಬೇಕಾಬಿಟ್ಟಿ ಸಾಲವನ್ನು ಕೂಡ ಮಾಡಲಾಗಿದೆ.
5. ವಿದ್ಯಾರ್ಥಿಗಳ ಪಾಸ್ ದುಡ್ಡನ್ನು ಸರ್ಕಾರ ನಿಗಮಕ್ಕೆ ನೀಡಿಲ್ಲ ಬಾಕಿ ಇಟ್ಟುಕೊಂಡಿದೆ.
ರ್ಯಾಲಿ ಹೇಗಿರಲಿದೆ?
* ಶುಕ್ರವಾರ 11 ಗಂಟೆಗೆ, ಲಾಲ್ಬಾಗ್ನಿಂದ ಶಾಂತಿನಗರದ ಕೆಎಸ್ಆರ್ ಟಿಸಿ ಮುಖ್ಯ ಕಚೇರಿಯವರೆಗೆ ರ್ಯಾಲಿ ನಡೆಯಲಿದೆ.
* ರಾಜ್ಯಾದ್ಯಾಂತ ಸಾರಿಗೆ ನೌಕರರು ಹಾಗೂ ಬಿಎಂಟಿಸಿ ಚಾಲಕ ನಿರ್ವಾಹಕರು ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
* ಕರ್ತವ್ಯಕ್ಕೆ ಹಾಜರಾಗದೇ ರ್ಯಾಲಿಯಲ್ಲಿ ಪಾಲ್ಗೊಳ್ಳೋದ್ರಿಂದ ಬಸ್ ಸೇವೆಯಲ್ಲಿ ವ್ಯತ್ಯಯವಾಗಬಹುದು.
* ಆದರೆ ನಾಳೆಯ ರ್ಯಾಲಿಗೆ ಕಡ್ಡಾಯವಾಗಿ ಸಿಬ್ಬಂದಿಗಳಿಗೆ ಭಾಗವಹಿಸುವಂತೆ ಸೂಚಿಸಿಲ್ಲ. ಆದರೆ ತಮ್ಮ ಬೇಡಿಕೆ ಈಡೇರಿಕೆಗಾಗಿ ನೌಕರರು ಸ್ವಯಂಪ್ರೇರಿತರಾಗಿ ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆಯಲ್ಲಿ ಭಾಗಿಯಾದರೆ ಜನರಿಗೆ ತೊಂದರೆಯಾಗಲಿದೆ.
* ಮೂರು ಸಾವಿರ ಜನ ಸೇರೋದ್ರಿಂದ ಶಾಂತಿನಗರ, ಲಾಲ್ ಬಾಗ್ ರಸ್ತೆ, ಜಯನಗರ ಅಸುಪಾಸು ಟ್ರಾಫಿಕ್ ಬಿಸಿ ತಟ್ಟಬಹುದು.