ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಕೈಚಳ ಮುಂದುವರಿದಿದ್ದು, ದುಷ್ಕರ್ಮಿಗಳು ಚಿನ್ನದ ಸರಕ್ಕಾಗಿ ಮಹಿಳೆಯನ್ನೇ ಬಲಿಪಡೆದಿದ್ದಾರೆ.
ನಗರದ ಲಕ್ಷ್ಮಿಪುರದಲ್ಲಿ ಕಳ್ಳರು ಮನೆಗೆ ನುಗ್ಗಿ ಗೃಹಿಣಿಯ ಕತ್ತು ಕೊಯ್ದು ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕುತ್ತಿಗೆಗೆ ಬಲವಾದ ಹೊಡೆತ ಬಿದ್ದಿದ್ದರಿಂದ ರಕ್ತಸ್ರಾವ ಉಂಟಾಗಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಲಕ್ಷ್ಮಿಪುರದ ನಿವಾಸಿ ಗಾಯಿತ್ರಿ (29) ಕೊಲೆಯಾದ ಗೃಹಿಣಿ. ಗಾಯಿತ್ರಿ ಅವರು ಬುಧವಾರ ಬೆಳಗ್ಗೆ ಮಕ್ಕಳನ್ನ ಶಾಲೆಗೆ ಬಿಟ್ಟು ವಾಪಸ್ ಮನೆಗೆ ಬಂದಿದ್ದರು. ಈ ವೇಳೆ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ್ದ ದುಷ್ಕರ್ಮಿಗಳು ನಿವಾಸದೊಳಗೆ ನುಗ್ಗಿ ಗಾಯಿತ್ರಿ ಅವರ ಕತ್ತು ಕೊಯ್ದು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಮಕ್ಕಳು ಶಾಲೆಯಿಂದ ಮನೆಗೆ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕಗ್ಗಲಿಪುರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಗಾಯಿತ್ರಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.