ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಅದರಲ್ಲೂ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಪ್ರತಿಭಟನೆ ಕಾವು ಜೋರಾಗಿದೆ. ಇದರ ಮಧ್ಯದಲ್ಲಿ ಇಬ್ಬರು ಗೋಲಿಬಾರ್ ಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ಹೆಚ್ ಎಸ್ ಆರ್ ಲೇಔಟ್ ಇನ್ಸ್ಪೆಕ್ಟರ್ ಪೌರತ್ವ ಕಾಯ್ದೆ ಬಗ್ಗೆ ಅರಿವು ಮೂಡಿಸುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಬೆಂಗಳೂರಿನ ಹೆಚ್ ಎಸ್ ಆರ್ ಲೇ ಔಟ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ ಹೆಚ್ಎಸ್ಆರ್ ಲೇ ಔಟ್ ಮಸೀದಿಗಳಿಗೆ ತೆರಳಿ ಕಾಯ್ದೆಯ ಬಗ್ಗೆ ಅರಿವು ಮೂಡಿಸಿದ್ದಾರೆ. ಗಲಭೆ, ಹಿಂಸಾಚಾರವಾಗುತ್ತಿದ್ದರೆ ಜನರಲ್ಲಿ ಅರಿವು ಮೂಡಿಸುವುದು ಅತ್ಯಂತ ಉತ್ತಮ ಪರಿಹಾರ ಎಂಬುದನ್ನ ಅರಿತ ಇವರು, ಎರಡು ಮಸೀದಿಗಳಿಗೆ ಹೋಗಿ ಮುಸ್ಲಿಮರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಖಾಕಿ ಧಿರಿಸಿನಲ್ಲಿ ಹೋಗಿ ಹರಡುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ, ಏನೇ ಮಾಡುವುದಿದ್ದರೂ ಮೊದಲು ನಿಜವಾದ ಸಂಗತಿಯೇನೆಂದು ತಿಳಿದುಕೊಂಡು ಮುಂದುವರಿಯಿರಿ. ಏನಾದರೂ ಸಂದೇಹಗಳು ಬಂದರೆ ಬಂದು ನಮ್ಮ ಬಳಿ ಬಂದು ಮೊದಲು ವಿಷಯ ತಿಳಿದುಕೊಳ್ಳಿ, ತಪ್ಪು ದಾರಿಗಿಳಿಯಬೇಡಿ ಎಂದರು.
ಮುಸಲ್ಮಾನರು, ಹಿಂದೂಗಳು, ಕ್ರಿಶ್ಚಿಯನ್ ರು ಎಲ್ಲಾ ಧರ್ಮದವರು ಒಂದೇ ನಾವೆಲ್ಲಾ ಸಹೋದರರು ಇದ್ದಂಗೆ. ನಾವೆಲ್ಲರೂ ಭಾರತೀಯರು ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನ ಅಡಿ ನಾವೆಲ್ಲಾ ಸಂತೋಷವಾಗಿ ಇದ್ದೀವಿ ಕೂಡಿ ಬಾಳೋಣ ಪೌರತ್ವ ನಿಷೇಧದ ಕಾಯ್ದೆ ಮುಸ್ಲಿಮರಿಗೆ ಆಗಲಿ, ಹಿಂದೂಗಳಿಗೆ ಆಗಲಿ ತೊಂದರೆ ಆಗಲ್ಲ ಇದಕ್ಕೆಲ್ಲಾ ಕಿವಿಗೊಡಬೇಡಿ. ಯಾವ ರೀತಿಯ ಸಂದೇಶ ವಾಟ್ಸಾಪ್ ಆಗಲಿ, ಫೇಸ್ ಬುಕ್ ಆಗಲಿ ಬಂದರೆ ನನಗೆ ತಿಳಿಸಿ ಅದರ ಬಗ್ಗೆ ನಾನು ಮಾಹಿತಿ ಕೊಡುತ್ತೇನೆ. ಹಾಗಾಗಿ ಗಲಭೆ ಗೊಂದಲ ಬೇಡ ಎಲ್ಲರೂ ಒಟ್ಟಾಗಿ ಕೂಡಿ ಬಾಳೋಣ ಎಂದಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗ್ತಿದೆ.
ಮೂಲತಃ ಚಿಕ್ಕಮಗಳೂರಿನವರಾದ ರಾಘವೇಂದ್ರ ಅವರು, 2003ರಲ್ಲಿ ಪೊಲೀಸ್ ಸೇವೆಗೆ ಸೇರಿ ಅನೇಕ ಕಡೆಗಳಲ್ಲಿ ಇದುವರೆಗೆ ಕೆಲಸ ಮಾಡಿದ್ದಾರೆ. ಕಳೆದ ಜನವರಿಯಲ್ಲಿ ಹೆಚ್ ಎಸ್ ಆರ್ ಲೇ ಔಟ್ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.
https://www.facebook.com/pavagada.soori.9/videos/119806289499343/