ಬೆಂಗಳೂರು: ಉಪ ಚುನಾವಣಾ ಕದನಲ್ಲಿ ಪ್ರತಿಷ್ಠಿತ ಕ್ಷೇತ್ರಕ್ಕೆ ಕಾಂಗ್ರೆಸ್ಸಿನಲ್ಲಿ ಸೂಕ್ತ ಅಭ್ಯರ್ಥಿಯೇ ಸಿಗುತ್ತಿಲ್ವಾ ಅನ್ನೋ ಪ್ರಶ್ನೆಯೊಂದು ಇದೀಗ ಎದ್ದಿದೆ.
ಹೌದು. ಯಶವಂತಪುರ ಕ್ಷೇತ್ರದಿಂದ ಮಾಜಿ ಶಾಸಕ ಪ್ರಿಯ ಕೃಷ್ಣರನ್ನ ಅಖಾಡಕಿಳಿಸಲು ಕಾಂಗ್ರೆಸ್ ತೀರ್ಮಾನಿಸಿತ್ತು. ಆದರೆ ಕಾಂಗ್ರೆಸ್ ನಾಯಕರ ಸೂಚನೆಗೆ ಪ್ರಿಯಾಕೃಷ್ಣ ಆಗಲ್ಲ ಎಂದಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸೋಮವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಿಯ ಕೃಷ್ಣರ ತಂದೆ ವಿಜಯ ನಗರ ಶಾಸಕ ಕೃಷ್ಣಪ್ಪರ ಬಳಿ ತಮ್ಮ ಪುತ್ರನನ್ನು ಯಶವಂತಪುರದಿಂದ ಅಖಾಡಕ್ಕೆ ಇಳಿಸುವಂತೆ ಕೈ ನಾಯಕರು ಸೂಚಿಸಿದ್ದಾರೆ. ಆದರೆ ಕೈ ನಾಯಕರ ಸಲಹೆಗೆ ಮಾಜಿ ಶಾಸಕ ಪ್ರಿಯಕೃಷ್ಣ ಒಪ್ಪಿಗೆ ಸೂಚಿಸಿಲ್ಲ.
ತಂದೆ ಕೃಷ್ಣಪ್ಪ ಬಳಿ ಮಾತನಾಡಿದ ಪ್ರಿಯ ಕೃಷ್ಣ, ಯಶವಂತಪುರ ಕ್ಷೇತ್ರಕ್ಕು ನನಗೂ ಏನು ಸಂಬಂಧ. ಅಲ್ಲದೆ ಅದು ದೊಡ್ಡ ಕ್ಷೇತ್ರ ಅಲ್ಲಿಗೆ ನಾನು ಹೊಸಬ. ಕ್ಷೇತ್ರ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಕೂಡಿದೆ. ಎಲ್ಲಾ ಕಡೆ ಓಡಾಟ ಮಾಡೋದು ಕಷ್ಟ. ಗೋವಿಂದರಾಜ ನಗರ ಕ್ಷೇತ್ರ ಬಿಟ್ಟು ನಾನೆಲ್ಲಿಗೂ ಹೋಗಲ್ಲ ಎಂದಿದ್ದಾರೆ.
ಶಾಸಕ ಕೃಷ್ಣಪ್ಪ ಈ ವಿಷಯವನ್ನ ಕಾಂಗ್ರೆಸ್ ನಾಯಕರ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕ ಸೋಮಶೇಖರ್ ವಿರುದ್ಧ ಪ್ರಬಲ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿ ಸೋಮಶೇಖರ್ ರನ್ನ ಸೋಲಿಸುವ ಕೈ ನಾಯಕರ ಪ್ರಯತ್ನಕ್ಕೆ ಸದ್ಯ ಹಿನ್ನಡೆ ಉಂಟಾಗಿದೆ.