ಬೆಂಗಳೂರು: ನಗರದಲ್ಲಿ ಬೋರ್ಡ್ ರಾಜಕಾರಣಕ್ಕೆ ಅಂತ್ಯ ಸಿಕ್ಕಿಲ್ಲ. ಬಡವರ ಔಷಧಿ ಮಳಿಗೆಯಲ್ಲಿ ನನ್ನ ಫೋಟೋ ಇಲ್ಲ ಎಂದು ಕಿತ್ತಾಟ ಶುರುವಾಗಿದೆ. ರಾಜಕಾರಣಿಗಳ ಜಗಳ ಜನ ವಿರೋಧಕ್ಕೆ ಗುರಿಯಾಗಿದೆ.
ಬೆಂಗಳೂರಿನ ದಾಸರಹಳ್ಳಿಯಲ್ಲಿ ಬೋರ್ಡ್, ಫೋಟೋ ರಾಜಕೀಯ ಜೋರಾಗಿದೆ. ಕೇಂದ್ರ ಸಚಿವ ಸದಾನಂದಗೌಡ, ಮಾಜಿ ಶಾಸಕ ಮುನಿರಾಜು ಫೋಟೋ ಇದೆ. ನನ್ನ ಫೋಟೋ ಇಲ್ಲ ಎಂದು ಸ್ಥಳೀಯ ಶಾಸಕರೊಬ್ಬರು ಬೋರ್ಡನ್ನೇ ಕಿತ್ತು ಹಾಕಿಸಿದ್ರಂತೆ.
ದಾಸರಹಳ್ಳಿ ಪ್ರಧಾನ ಮಂತ್ರಿ ಜನೌಷಧಿ ಮಳಿಗೆಯಲ್ಲಿ ತಮ್ಮ ಫೋಟೋ, ಹೆಸರು ಹಾಕಿಸಿಲ್ಲ ಎಂದು ಬಿಬಿಎಂಪಿ ಪ್ರಹರಿ ವಾಹನ ಬಳಸಿ ಸ್ಥಳೀಯ ಜೆಡಿಎಸ್ ಶಾಸಕ ಮಂಜುನಾಥ್ ಬೋರ್ಡ್ ಕಿತ್ತು ಹಾಕಿಸಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಸಚಿವ ಸದಾನಂದ ಗೌಡ ಈ ಔಷಧಾಲಯ ಉದ್ಘಾಟಿಸಿದ್ದು, ಈ ವೇಳೆ ಸ್ಥಳೀಯ ಜೆಡಿಎಸ್ ಶಾಸಕ ಮಂಜುನಾಥ್ ಅವರನ್ನು ಈ ಕಾರ್ಯಕ್ರಮಕ್ಕೆ ಕರೆದಿಲ್ಲ. ಜೊತೆಗೆ ಮಾಜಿ ಶಾಸಕರ ಫೋಟೋ ಹಾಕಿರೋದಕ್ಕೆ ಹೀಗೆ 10 ಸಾವಿರ ಬೆಲೆ ಬಾಳುವ ಎರಡು ಬೋರ್ಡ್ ಕಿತ್ತು ಹಾಕಿಸಿದ್ದಾರೆ ಎಂದು ವ್ಯಾಪಾರಿ ಶಿವಪ್ರಸಾದ್ ಆರೋಪಿಸಿದ್ದಾರೆ.
ಬೋರ್ಡ್, ಫ್ಲೆಕ್ಸ್ ನಿಷೇಧವಿದೆ ಪಾಲಿಕೆ ಮೇಲಾಧಿಕಾರಿ ಹೇಳಿದ್ರು ರಿಮೂವ್ ಮಾಡ್ತಾ ಇದ್ದೇವೆ ಎಂದು ಪ್ರಹರಿ ಸಿಬ್ಬಂದಿ ಹೇಳ್ತಾರೆ.
ಬಡವರ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಫೋಟೋ ಹಾಕಲು ಅನುಮತಿ ಇದೆ. ಆದರೆ ಉಳಿದ ರಾಜಕಾರಣಿಗಳು ನಮ್ಮ ಫೋಟೋ ಇಲ್ಲ ಎಂದು ಚಿಂತೆ ಮಾಡಿಯೇ ಘಟನೆ ನಡೆದಿದ್ದರೆ ಇದು ವಿಪರ್ಯಾಸವೇ ಸರಿ.