ಬೆಂಗಳೂರು: ನಗರದಲ್ಲಿ ಇಂದು ಬಿಜೆಪಿ ಮುಖಂಡರು ಸ್ವಲ್ಪ ಗಲಿಬಿಲಿ ಆಗಿದ್ರು. 10 ನಿಮಿಷ ಕರೆಂಟ್ ಕೊಟ್ಟ ಶಾಕ್ಗೆ ಶಾಸಕರು, ಸಂಸದರೇ ಬೆವರಿಳಿದು ಹೋಗಿದ್ರು. ಅದಕ್ಕೆ ಕಾರಣ ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇದ್ದಾಗಲೇ 10 ನಿಮಿಷ ಕರೆಂಟ್ ಕೈಕೊಟ್ಟು ಕಾರ್ಯಕ್ರಮ ಸ್ತಬ್ಧವಾಗಿದ್ದು.
ಅಂದಹಾಗೆ ಬಸವನಗುಡಿಯ ಮರಾಠ ಭವನದಲ್ಲಿ ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ಭಾಗದ ಜಿಲ್ಲಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಇತ್ತು. ಸಮಾರಂಭದಲ್ಲಿ ಅದೇಕೋ ಏನೋ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿದ ಬಳಿಕ ಅಂದರೆ ಮಾಜಿ ಶಾಸಕ ಮುನಿರಾಜು ಮಾತನಾಡುವಾಗ ಇದ್ದಕ್ಕಿದ್ದಂತೆ ಕರೆಂಟ್ ಕೈಕೊಡ್ತು. ಜನರೇಟರ್ ವ್ಯವಸ್ಥೆ ಇಲ್ಲದೆ ಬಿಜೆಪಿ ನಾಯಕರು ಪರದಾಡಿದ್ರು. ವೇದಿಕೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಶಾಸಕರು ಕೂಡ ಹಾಜರಿದ್ದರು. ಇಂತಹ ಕಾರ್ಯಕ್ರಮಕ್ಕೆ ಕರೆಂಟ್ ಕೈ ಕೊಟ್ಟಿದ್ದು, ನೂತನ ಅಧ್ಯಕ್ಷ ಎನ್.ಆರ್ ರಮೇಶ್ ತಲೆಬಿಸಿಗೆ ಕಾರಣವಾಯ್ತು. ಅಷ್ಟೇ ಅಲ್ಲ ಆಯೋಜಕರಿಗೆ ಶಾಸಕರೆಲ್ಲ ಪ್ರಶ್ನೆಗಳ ಸುರಿಮಳೆಗೈದ್ರು.
ಕರೆಂಟ್ ಇಲ್ಲದ ಕಾರಣ ವೇದಿಕೆ ಮೇಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸುಮ್ಮನೆ ಕುಳಿತಿದ್ರು. 10 ನಿಮಿಷಗಳ ಕಾಲ ಕರೆಂಟ್ ಬರಲೇ ಇಲ್ಲ. ಬ್ಯಾಟರಿ ಚಾಲಿತ ಮೈಕ್ ಇಟ್ಟುಕೊಂಡು ಸ್ವಲ್ಪ ಸರ್ಕಸ್ ಮಾಡಿದ್ರು. ಕಡೆಗೆ ಬೆಸ್ಕಾಂ ಗಮನಕ್ಕೆ ತಂದು ಪ್ರಭಾವ ಬೀರಿದ ಬಳಿಕ ಕರೆಂಟ್ ಬಂತು. ಆಗ ಬಿಜೆಪಿ ಕಾರ್ಯಕ್ರಮದ ಆಯೋಜಕರು ನಿಟ್ಟುಸಿರು ಬಿಟ್ಟರು.