ಬೆಂಗಳೂರು: ದೇಶದ ವ್ಯವಸ್ಥೆ ಬದಲಾವಣೆ ಆಗಬೇಕಾದರೆ, ಬಿಜೆಪಿ ಸರ್ಕಾರ ಹೋಗಬೇಕಾದರೆ ಜಾತ್ಯಾತೀತ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಒಂದಾಗಿ ಹೋಗಬೇಕು ಅಂತ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ದೇವೇಗೌಡ ಕರೆ ನೀಡಿದ್ದಾರೆ.
ದಾಸನಪುರ ಕ್ಷೇತ್ರದಲ್ಲಿ ಪೌರತ್ವ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ) ವಿರುದ್ಧ ನಡೆದ ಪ್ರತಿಭಟನೆಯ ರ್ಯಾಲಿಯಲ್ಲಿ ಮಾತಾಡಿದ ದೇವೇಗೌಡರು, ಪ್ರಾದೇಶಿಕ ಪಕ್ಷಗಳು ಒಟ್ಟಾಗುವಂತೆ ಕರೆ ನೀಡಿದ್ದಾರೆ.
ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನೇ ಉದಾಹರಣೆ ಕೊಟ್ಟು ದೇವೇಗೌಡರು ಪ್ರಾದೇಶಿಕ ಪಕ್ಷಗಳಿಗೆ ಒಂದಾಗುವಂತೆ ಕರೆ ನೀಡಿದರು. ಸಮ್ಮಿಶ್ರ ಸರ್ಕಾರ ಮಾಡಿದಾಗ ಸೋನಿಯಾಗಾಂಧಿ ರಾಜ್ಯಕ್ಕೆ ಬಂದಿದ್ದರು. ಅಮೆರಿಕ ಪತ್ರಿಕೆ ಕರ್ನಾಟಕದಲ್ಲಿ ಹೊಸ ರಾಜಕೀಯ ವ್ಯವಸ್ಥೆ ಪ್ರಾರಂಭ ಅಂತ ಬರೆದಿದ್ದರು. ಆದರೆ ಕಾಂಗ್ರೆಸ್ಸಿಗೆ ತಾಳ್ಮೆ ಕಡಿಮೆ ಹೀಗಾಗಿ ಸರ್ಕಾರ ಬಿದ್ದು ಹೋಯ್ತು. ಕಾಂಗ್ರೆಸ್ಸಿಗೆ ತಾಳ್ಮೆ ಇದ್ದಿದ್ದರೆ ಸಮ್ಮಿಶ್ರ ಸರ್ಕಾರ ಇರುತ್ತಿತ್ತು ಅಂತ ಕಾಂಗ್ರೆಸ್ ನಾಯಕರ ಮೇಲೆ ಗೂಬೆ ಕೂರಿಸಿದರು.
ಮೋದಿಯನ್ನ ಇಳಿಸಬೇಕಾದರೆ ಇಂದು ಜಾತ್ಯಾತೀತ ಪಕ್ಷಗಳು ಒಂದಾಗಬೇಕು. ಜಾತ್ಯಾತೀತ ಶಕ್ತಿಗಳು ಒಂದಾದರೆ ಈ ಕೆಟ್ಟ ಸರ್ಕಾರ ತೆಗೆಯಲು ಸಾಧ್ಯ. ಇಲ್ಲ ಅಂದ್ರೆ ಏನು ಮಾಡೋಕೆ ಆಗಲ್ಲ ಎಂದರು. ಈಗಾಗಲೇ ಮೂರು ರಾಜ್ಯಗಳಲ್ಲಿ ಒಟ್ಟಾಗಿ ಹೋದ ಹಿನ್ನೆಲೆಯಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೀಗೆ ಜಾತ್ಯಾತೀತ ಪಕ್ಷಗಳು ಒಂದಾದರೆ ಬಿಜೆಪಿ ಸರ್ಕಾರವನ್ನ ಇಳಿಸಬಹುದು ಅಂತ ದೇವೇಗೌಡ ತಿಳಿಸಿದ್ರು.