ಬೆಂಗಳೂರು: ಎರಡೂ ರಾಜ್ಯಗಳಲ್ಲಿ ಸ್ಥಳೀಯ ವಿಚಾರಗಳು, ಸ್ಥಳೀಯ ನಾಯಕರ ಕಡೆಗಣನೆ ಮಾಡಿದ್ದೇ ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಸೀಟುಗಳು ಬರಲು ಕಾರಣ ಎಂದು ಭಾವಿಸಿದ ಬಿಜೆಪಿ ಹೈಕಮಾಂಡ್, ಸ್ಥಳೀಯ ನಾಯಕತ್ವಕ್ಕೆ ಮಣೆ ಹಾಕಲು ನಿರ್ಧರಿಸಿದೆ.
ಸ್ಥಳೀಯ ನಾಯಕತ್ವವನ್ನು ಎದುರು ಹಾಕಿಕೊಂಡರೆ ಚುನಾವಣೆಗಳಲ್ಲಿ ಕಷ್ಟ ಆಗುತ್ತದೆ ಎಂಬುದನ್ನು ಅರಿತಿದೆ. ಪರಿಣಾಮ ಯಡಿಯೂರಪ್ಪಗೆ ಅದೃಷ್ಟ ಖುಲಾಯಿಸಿದೆ. ಮೊನ್ನೆ ಮೊನ್ನೆಯವರೆಗೂ ಯಡಿಯೂರಪ್ಪಗೆ ಯಾವುದಕ್ಕೂ ಸ್ವಾತಂತ್ರ್ಯ ಕೊಡದೆ ಕಾಟ ಕೊಡುತ್ತಿದ್ದ ಹೈಕಮಾಂಡ್ ಇದೀಗ ಫುಲ್ ಸಾಫ್ಟ್ ಆಗಿದೆ.
ಬಿಎಸ್ವೈ ವಿರುದ್ಧ ಹೋಗದೇ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗಲು ತೀರ್ಮಾನಿಸಿದೆ. ಬಿಎಸ್ವೈ ವಿರುದ್ಧ ಯಾವುದೇ ಹೇಳಿಕೆ ಕೊಡಬಾರದು ಎಂದು ಅವರ ವಿರೋಧಿಗಳಿಗೆ ಕಟ್ಟಪ್ಪಣೆ ನೀಡಿದೆ. ಬಿಎಸ್ವೈ ಜತೆ ಸ್ನೇಹದಿಂದ ಇರುವಂತೆ ರಾಜ್ಯದ ಆರ್ಎಸ್ಎಸ್ ಮುಖಂಡರಿಗೂ ಹೈಕಮಾಂಡ್ ನಿರ್ದೇಶನ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪರಿಣಾಮ ಕಳೆದ ಎರಡು ಮೂರು ದಿನಗಳಿಂದ ಆರ್ಎಸ್ಎಸ್ ಮುಖಂಡರು ಬಿಎಸ್ವೈ ಜೊತೆ ಮಾತುಕತೆ ಶುರು ಮಾಡಿದ್ದಾರೆ. ಕೆಲವರು ಬಿಎಸ್ವೈ ನಿವಾಸಕ್ಕೂ ಬರಲಾರಂಭಿಸಿದ್ದಾರೆ ಎನ್ನಲಾಗಿದೆ.