ಬೆಂಗಳೂರು: ಇದು ಕುಂದಾ ನಗರಿಯ ಸಾಂಪ್ರದಾಯಿಕ ಕದನದ ಮುಂದುವರಿದ ಭಾಗ. ವಿಪಕ್ಷ ನಾಯಕ, ಸಿಎಲ್ಪಿ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷರ ನೇಮಕದ ಜೊತೆಗೆ ಸಿಡಬ್ಲುಸಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ನೇಮಕವೂ ನಡೆಯಲಿದೆ.
ಬಹುತೇಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಥವಾ ಸಿಡಬ್ಲುಸಿ ಸದಸ್ಯನ ಸ್ಥಾನ ಸತೀಶ್ ಜಾರಕಿಹೋಳಿ ಪಾಲಾಗುವ ಸಾಧ್ಯತೆ ಇದೆ. ಆದರೆ ಇದೇ ಸಂದರ್ಭದಲ್ಲಿ ಅನಿರೀಕ್ಷಿತ ತಿರುವು ಎದುರಾಗಿದೆ. ಕೆಪಿಸಿಸಿ, ವಿಪಕ್ಷ, ಸಿಎಲ್ಪಿ ಹಾಗೂ ಇತರೆ ಆಯ್ಕೆ ಸಂದರ್ಭದಲ್ಲಿ ಮಹಿಳೆಯರಿಗೂ ಆದ್ಯತೆ ನೀಡುವಂತೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒತ್ತಡ ಹೇರತೊಡಗಿದ್ದಾರೆ.
ಸಿಡಬ್ಲುಸಿ ಅಥವಾ ಎಐಸಿಸಿ ಪ್ರಧಾನ ಕಾರ್ಯದರ್ಶಿಗೆ ರಾಜ್ಯದಿಂದ ಮಹಿಳೆಯರಿಗೆ ಆದ್ಯತೆ ನೀಡಿ ಅನ್ನೋದು ಆ ಡಿಮ್ಯಾಂಡ್. ಅಲ್ಲಿಗೆ ಸುತ್ತಿ ಬಳಸಿ ಅದು ಸತೀಶ್ ಜಾರಕಿಹೋಳಿ ಬುಡಕ್ಕೇ ಬಂದು ನಿಂತಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಕೇಳುತ್ತಿರುವ ಮಹಿಳಾ ಆದ್ಯತೆ ಸರಿ ಇರಬಹುದು. ಆದರೆ ಸತೀಶ್ ಜಾರಕಿಹೋಳಿ ಹೆಸರು ಕೇಳಿ ಬರುತ್ತಿರುವ ಸ್ಥಾನದ ಮೇಲೆಯೇ ಲಕ್ಷ್ಮಿ ಕಣ್ಣು ಬಿದ್ದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಇದು ಕುಂದಾನಗರಿಯ ಹಳೆ ಗಲಾಟೆಯ ಮುಂದುವರಿದ ಭಾಗ. ಸಹೋದರರ ಸವಾಲಿನ ಹಳೆ ಸಿಟ್ಟನ್ನು ಲಕ್ಷ್ಮಿ ಮುಂದುವರಿಸುತ್ತಿರುವ ಹಠನಾ ಅನ್ನೋ ಚರ್ಚೆ ಕೈ ಪಾಳಯದಲ್ಲಿ ಜೋರಾಗಿಯೇ ನಡೆಯುತ್ತಿದೆ. ಇದು ಲಕ್ಷ್ಮಿ ಹಠನಾ ಅಥವಾ ಮಹಿಳಾ ಪರ ಧ್ವನಿನಾ ಗೊತ್ತಿಲ್ಲ. ಆದರೆ ಸುತ್ತಿ ಬಳಸಿ ಲಕ್ಷ್ಮಿ ವರ್ಸಸ್ ಸತೀಶ್ ಜಾರಕಿಹೋಳಿ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿರುವುದಂತು ಹೌದು.