ಬೆಂಗಳೂರು: ಹಲಸೂರು ಕೆರೆ ಅಂಗಳದಲ್ಲಿ ಸಸಿ ನೆಡುವ ಮೂಲಕ 8,000ಕ್ಕೂ ಹೆಚ್ಚು ಸಸಿ ನೆಡುವ ಕಾರ್ಯಕ್ರಮಕ್ಕೆ ಶನಿವಾರ ಮೇಯರ್ ಚಾಲನೆ ನೀಡಿದರು. ಈ ವೇಳೆ ಸಂಸದ ಪಿ.ಸಿ.ಮೋಹನ್, ಸ್ಥಳೀಯ ಶಾಸಕ ರಿಜ್ವಾನ್ ಹರ್ಷದ್, ಸ್ಥಳೀಯ ಪಾಲಿಕೆ ಸದಸ್ಯರು ಮಮತಾ ಶರವಣ, ಪಾಲಿಕೆ ಆಯುಕ್ತರು ಬಿ.ಹೆಚ್.ಅನಿಲ್ ಕುಮಾರ್, ವಲಯ ಜಂಟಿ ಆಯುಕ್ತರು ಶ್ರೀಮತಿ ಪಲ್ಲವಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕೆರೆಯ ಅಂಗಳ ಹಾಗೂ ಉದ್ಯಾನದಲ್ಲಿ ಪಾಲಿಕೆ ಮತ್ತು ಕೋಟಿ ವೃಕ್ಷ ಸೈನ್ಯ ಸಹಯೋಗದಲ್ಲಿ 8,000ಕ್ಕೂ ಹೆಚ್ಚು ವಿವಿಧ ಜಾತಿಯ ಸಸಿಗಳನ್ನು ನೆಡಲಾಗುತ್ತಿದ್ದು, ಕೋಟಿ ವೃಕ್ಷ ಸೈನ್ಯವೇ ಎರಡು ವರ್ಷಗಳ ಕಾಲ ಸಸಿಗಳನ್ನು ಪೋಷಣೆ ಮಾಡಲಿದೆ. ನಗರದ ಸೆಟ್ರೀಸ್ ಮತ್ತಿ ಬಯೋಟಾ ಸಾಯಿಲ್ ಸಂಸ್ಥೆಗಳು ಈ ಸಸಿಗಳನ್ನು ವಿತರಿಸಿದ್ದು, ವಿವಿಧ ಖಾಸಗಿ ಸಂಘ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು, ಪರಿಸರ ತಜ್ಞರು, ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗಳನ್ನು ನೆಡಲಾಯಿತು.
ನಗರದಲ್ಲಿ ಪರಿಸರ ಉಳಿಸುವ ನಿಟ್ಟಿನಲ್ಲಿ ಪಾಲಿಕೆ ವತಿಯಿಂದ ಪ್ರತಿ ವರ್ಷವೂ ಸಸಿಗಳನ್ನು ನೆಡಲಾಗುತ್ತದೆ. ನಗರದ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಟ್ಟು ಉದ್ಯಾನ ನಗರಿಯನ್ನಾಗಿಸುವುದು ಪಾಲಿಕೆಯ ಗುರಿಯಾಗಿರುತ್ತದೆ.ನಂತರ ಮೇಯರ್ ಹಾಗೂ ಪಾಲಿಕೆ ಆಯುಕ್ತರು ಇಂದೋರನಲ್ಲಿ ಕಸ ವಿಲೇವಾರಿ ಮಾಡಲು ಬಳಸುವ ಮಾದರಿಯ ಆಟೋ ಟಿಪ್ಪರ್ ಅನ್ನು ಪರಿಶೀಲಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ನಿವಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಗರದಲ್ಲಿ ಇಂದೋರ್ ಮಾದರಿಯ ಕಸ ವಿಲೇವಾರಿಯನ್ನು ಪ್ರಾಯೋಗಿಕವಾಗಿ ನಾಲ್ಕು ವಾರ್ಡ್ ಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಒಂದೇ ಆಟೋ ಟಿಪ್ಪರ್ ನಲ್ಲಿ ಹಸಿ ಮತ್ತು ಒಣ ಕಸ ಸಂಗ್ರಹಿಸಬಹುದಾಗಿದ್ದು, ಹಸಿ ಕಸ ಸಂಗ್ರಹಕ್ಕೆ ಹಸಿರು ಬಣ್ಣ ಹಾಗೂ ಒಣ ಕಸ ಸಂಗ್ರಹಕ್ಕೆ ನೀಲಿ ಬಣ್ಣ ಬಳಿಯಲಾಗಿದೆ. ಇದರಿಂದ ಸಾರ್ವಜನಿಕರು ಮತ್ತು ಪೌರಕಾರ್ಮಿಕರಿಗೆ ಯಾವುದೇ ಗೊಂದಲಗಳು ಉಂಟಾಗುವುದಿಲ್ಲ. ಸಾರ್ವಜನಿಕರು ವಿಂಗಡಿಸಿಕೊಟ್ಟ ಕಸ ಸಂಗ್ರಹಿಸಿ ವಿಲೇವಾರಿ ಮಾಡಲು ಯೋಜಿಸಿದೆ.