ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯಿಂದ ಇದೀಗ ಬಿಬಿಎಂಪಿಯಲ್ಲೂ ಅಧಿಕಾರಕ್ಕೇರಲು ಮೇಯರ್ ಚುನಾವಣೆಗೆ ವಾರಕ್ಕೂ ಮುನ್ನವೇ ಪಕ್ಷೇತರ ಸದಸ್ಯರಿಗೆ ಗಾಳ ಹಾಕಲಾಗಿದೆ.
ಈ ಬಾರಿಯ ಮೇಯರ್ ಚುನಾವಣೆಯಲ್ಲಿ ಪಕ್ಷೇತರ ಸದಸ್ಯರೇ ಗೆಲುವಿಗೆ ನಿರ್ಣಾಯಕರಾಗಿರುವುದರಿಂದ ಮೂವರು ಪಕ್ಷೇತರ ಸದಸ್ಯರನ್ನು ನಗರದ ಬಿಜೆಪಿ ಶಾಸಕರೊಬ್ಬರು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಪಕ್ಷೇತರ ಸದಸ್ಯರಾದ ಲಕ್ಷ್ಮಿನಾರಾಯಣ್ (ಗುಂಡಣ್ಣ), ರಮೇಶ್,ಗಾಯತ್ರಿ ಹಾಗೂ ಆನಂದ್ ಅವರಿಗೆ ಬೊಮ್ಮನಹಳ್ಳಿಯ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಗಾಳ ಹಾಕಿ ಗೋವಾಗೆ ಕರೆದೊಯ್ದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಪಕ್ಷೇತರ ಸದಸ್ಯರ ಮೊಬೈಲ್ ಫೋನ್ಗಳು ಸಂಪರ್ಕ ದೊರೆಯದಿರುವುದು ಇದನ್ನು ಪುಷ್ಠಿಕರಿಸಿದೆ.
ಬಿಬಿಎಂಪಿಯಲ್ಲಿ ಕಾಂಗ್ರೆಸ್ ನಾಲ್ಕು ಬಾರಿ ಅಧಿಕಾರ ಹಿಡಿಯಲು ಅನರ್ಹ ಶಾಸಕ ಮುನಿರತ್ನವರ ಶ್ರಮವಿತ್ತು. ಡಿಕೆ ಸೋದರರು ಮುನಿರತ್ನವರ ಮೂಲಕ ಮೇಯರ್ ಸ್ಥಾನ ಕಾಂಗ್ರೆಸ್ ತೆಕ್ಕಗೆ ತೆಗೆದುಕೊಳ್ಳಲು ಯಶಸ್ವಿಯಾಗುತ್ತಿದ್ದರು. ಆದರೀಗ ಡಿಕೆ ಸೋದರರು ತಮ್ಮದೇ ಆದ ಸಮಸ್ಯೆಯಲ್ಲಿ ಸಿಲುಕಿದ್ದು, ದೆಹಲಿಯಲ್ಲಿದ್ದಾರೆ. ಇತ್ತ ಶಾಸಕ ಮುನಿರತ್ನ ಕಾಂಗ್ರೆಸ್ ನಿಂದ ಅನರ್ಹಗೊಂಡಿದ್ದಾರೆ. ಉಳಿದಿರುವ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಮೈತ್ರಿ ಸರ್ಕಾರದಲ್ಲಿ ಸ್ಥಾನ ನೀಡದಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ. ಈಗಾಗಲೇ ತಮ್ಮ ಕ್ಷೇತ್ರದ ಗಂಗಾಬಿಕೆ ಅವರನ್ನು ಮೇಯರ್ ಮಾಡಲಾಗಿದೆ. ಹಾಗಾಗಿ ಸೋತು ಕೈ ಸುಟ್ಟುಕೊಳ್ಳುವದಕ್ಕಿಂತ ದೂರ ಉಳಿಯಲು ರಾಮಲಿಂಗಾ ರೆಡ್ಡಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿತ್ತು.
ಇತ್ತ ಕಳೆದ ನಾಲ್ಕು ಬಾರಿ ಅಧಿಕಾರ ಅನುಭವಿಸಿರುವ ಜೆಡಿಎಸ್ ದೂರ ಉಳಿದುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಜೆಡಿಎಸ್ ಶಾಸಕ ಗೋಪಾಲಯ್ಯ ಅನರ್ಹಗೊಂಡಿದ್ದಾರೆ. ಅನರ್ಹ ಶಾಸಕ ಪತ್ನಿ ಹೇಮಲತಾರನ್ನ ಮೇಯರ್ ಮಾಡಿಸಲು ಪೈಪೋಟಿ ನಡೆಸಿದ್ದಾರೆ ಎನ್ನಲಾಗಿತ್ತು.