ಬೆಂಗಳೂರು: ಕರ್ನಾಟಕದಲ್ಲಿ ಎರಡು ವಾರಗಳ ಹಿಂದೆ ಆರಂಭಗೊಂಡಿರುವ ‘ರಾಜಕೀಯ ಕ್ರಿಕೆಟ್’ ಟೂರ್ನಿಯ ಅಂತಿಮ ಫಲಿತಾಂಶ ಗುರುವಾರ ಪ್ರಕಟವಾಗಲಿದ್ದು ಯಡಿಯೂರಪ್ಪ “ಈ ಬಾರಿ ನಮಗೆ ಕಪ್” ಎಂದು ಹೇಳಿ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಭಾರೀ ರಾಜ್ಯ ರಾಜಕೀಯ ಬೆಳವಣಿಗೆಗಳ ನಡೆಯುತ್ತಿರುವ ಬೆನ್ನಲ್ಲೇ ಫುಲ್ ಖುಷಿ ಮೂಡ್ನಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರೆಸಾರ್ಟಿನಲ್ಲಿ ಕ್ರಿಕೆಟ್ ಆಡಿ ಸಂಭ್ರಮಿಸಿದ್ದಾರೆ.
ರಮಡ ರೆಸಾರ್ಟ್ ನಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಬ್ಯಾಟಿಂಗ್ ಮಾಡಿದ್ದಾರೆ. ಈ ವೇಳೆ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಅನೇಕ ಶಾಸಕರು ಬಿ.ಎಸ್. ಯಡಿಯೂರಪ್ಪನವರಿಗೆ ಸಾಥ್ ಕೊಟ್ಟಿದ್ದಾರೆ. ಅಲ್ಲೇ ಇದ್ದ ಅನೇಕರು ಈ ದೃಶ್ಯವನ್ನು ತಮ್ಮ ಮೊಬೈಲ್ ಸೆರೆ ಹಿಡಿದಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ರಾಜಕೀಯ ಬೆಳವಣಿಗೆ ಅನುಕೂಲಕರವಾಗಿದೆ. ನಾನು ಖುಷಿಯಾಗಿ ನೆಮ್ಮದಿಯಾಗಿದ್ದೇನೆ. ಮೂರು ದಿನಗಳಲ್ಲಿ ರಾಜ್ಯದ ರಾಜಕೀಯದಲ್ಲಿ ಬದಲಾವಣೆ ಆಗಲಿದೆ. ಬಿಜೆಪಿಗೆ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಗಲಿದೆ. ಮುಂಬೈನಲ್ಲಿ ಎಲ್ಲಾ ಅತೃಪ್ತ ಶಾಸಕರು ಒಗ್ಗಟ್ಟಾಗಿದ್ದಾರೆ. ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲವೆಂದು ಹೇಳಿದ್ದಾರೆ. ಈ ಪರಿಸ್ಥಿತಿ ನಮಗೆ ಅನುಕೂಲಕರವಾಗಿದೆ. ಹೀಗಾಗಿ ಹರ್ಷದಿಂದ ಇದ್ದೇನೆ ಎಂದು ಹೇಳಿದ್ದರು.
ಸದಾ ಗಂಭೀರವಾಗಿರುತ್ತಿದ್ದ ಬಿ.ಎಸ್.ಯಡಿಯೂರಪ್ಪ ಕಳೆದ ನಾಲ್ಕು ದಿನದಿಂದ ಫುಲ್ ಖುಷ್ ಆಗಿದ್ದಾರೆ. ಕೊಂಚ ಮುಖ ಗಂಟು ಹಾಕಿಕೊಂಡೆ ಇರುತ್ತಿದ್ದ ಅವರ ಮುಖದಲ್ಲಿ ಈಗ ಮರೆಯಾಗದ ಮಂದಹಾಸ ಕಾಣಿಸುತ್ತಿದೆ.