ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳಲು ಫ್ಲೈಓವರ್ ಹತ್ತಿದ ವ್ಯಕ್ತಿಯೊಬ್ಬನನ್ನು ಅಯ್ಯಪ್ಪ ಸ್ವಾಮಿ ಭಕ್ತರು ರಕ್ಷಣೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ನಗರದ ಹೊಸಕೆರೆಹಳ್ಳಿಯ ನೈಸ್ ರೋಡ್ ಬಳಿ ಈ ಘಟನೆ ನಡೆದಿದ್ದು, 45 ವರ್ಷದ ಅಪರಿಚಿತ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಗಿರಿನಗರದ ಸುಮಾರು ಮೂವತ್ತುಕ್ಕೂ ಹೆಚ್ಚು ಜನರು ಇಂದು ಶಬರಿಮಲೆಗೆ ಹೊರಟಿದ್ದರು. ಹೊಸಕೆರೆಹಳ್ಳಿ ಮಾರ್ಗವಾಗಿ ನೈಸ್ ರೋಡ್ಗೆ ಎಂಟ್ರಿಯಾದ ವೇಳೆ ನೈಸ್ ರೋಡ್ನ ಫ್ಲೈಓವರ್ ಮೇಲೆ ವ್ಯಕ್ತಿವೊಬ್ಬ ರಸ್ತೆಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡುತ್ತಿರುವುದು ಕಂಡು ಬಂದಿದೆ.
ತಕ್ಷಣ ವಾಹನ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ ಅಯ್ಯಪ್ಪ ಸ್ವಾಮಿ ಭಕ್ತರು, ರಸ್ತೆಯ ಎರಡು ಕಡೆಯ ವಾಹನಗಳನ್ನು ನಿಲ್ಲಿಸಿ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಭಕ್ತರ ಕೈಗೆ ಸಿಗದೆ ಸುಮಾರು ಅರ್ಧ ಗಂಟೆಗಳ ಕಾಲ ಆತ್ಮಹತ್ಯೆಗೆ ಯತ್ನಿಸಿದ್ದ. ಎರಡು ಕಡೆಗಳಿಂದ ಅಯ್ಯಪ್ಪ ಸ್ವಾಮಿ ಭಕ್ತರು ಆ ವ್ಯಕ್ತಿಯನ್ನು ಸುತ್ತುವರೆದು ಕೊನೆಗೆ ಆತನನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.
ಇಷ್ಟೇಲ್ಲಾ ನಡೆಯೋ ಹೊತ್ತಿಗೆ ಹೊಯ್ಸಳ ಪೊಲೀಸರು ಸ್ಥಳಕ್ಕೆ ಬಂದು ಆ ವ್ಯಕ್ತಿಯನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ. ಆತ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ. ಆ ವ್ಯಕ್ತಿ ಯಾರು? ಎನ್ನುವುದು ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಿದೆ.