ಬೆಂಗಳೂರು: ಕೆಪಿಸಿಸಿ ನೂತನ ಸಾರಥಿ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಿದಾಗ ಡಿ.ಕೆ.ಶಿವಕುಮಾರ್ ವಿಧಾನಸೌಧದಲ್ಲೇ ಇದ್ದರು. ಕೆಪಿಸಿಸಿ ಅಧ್ಯಕ್ಷರ ನೇಮಕ ಮಧ್ಯಾಹ್ನ ಗಂಟೆಗೆ ಅಧಿಕೃವಾಗಿ ಪ್ರಕಟವಾಗುತ್ತೆ ಎಂದು ಡಿಕೆಶಿಗೆ ಒಂದು ಗಂಟೆ ಮೊದಲೇ ಗೊತ್ತಿತ್ತಂತೆ.
ಮೊದಲೇ ವಿಚಾರ ತಿಳಿದ ಹಿನ್ನೆಲೆಯಲ್ಲಿ ಡಿಕೆಶಿ ಎಲ್ಲಿಯೂ ಹೋಗದೇ ವಿಧಾನಸಭೆಯ ವಿರೋಧ ಪಕ್ಷದ ಮೊಗಸಾಲೆಯಲ್ಲೇ ಕುಳಿತಿದ್ದರು. ಮೊಗಸಾಲೆಯಲ್ಲಿ ಡಿಕೆಶಿ ಇರುವಾಗಲೇ ಕೆಪಿಸಿಸಿ ಸಾರಥಿ ಪ್ರಕಟವಾಗಿ ಸಂಭ್ರಮ ಮನೆ ಮಾಡಿತು. ಅಧಿಕೃತ ಆದೇಶದ ಕಾಪಿ ತಲುಪಿದ ಕೂಡಲೇ ಡಿಕೆಶಿ ಭಾವುಕರಾದರು. ಅಲ್ಲಿಯೇ ಇದ್ದ ಶಾಸಕರೆಲ್ಲರೂ ಡಿಕೆಶಿಗೆ ಶುಭಾಶಯ ಕೋರಿದರು.
ಆ ವೇಳೆ ವಿಧಾನಸಭೆ ಮೊಗಸಾಲೆಯ ತಮ್ಮ ಕೊಠಡಿಯಿಂದ ಸಿದ್ದರಾಮಯ್ಯ ಹೊರ ಬರುತ್ತಿರುವಾಗ ಡಿಕೆಶಿ ತೆರಳಿದರು. ಆಗ ಡಿಕೆಶಿಯ ಬೆನ್ನುತಟ್ಟಿ ಸಿದ್ದರಾಮಯ್ಯ ವಿಶ್ ಮಾಡಿದರು. ನಿಮಗೆ ವಿಶ್ ಮಾಡಲು ಬಂದಿದ್ದು ಎಂದು ಸಿದ್ದರಾಮಯ್ಯಗೆ ಡಿಕೆಶಿ ಗುಲಾಬಿ ಹೂ ಕೊಟ್ಟರು. ಅಯ್ಯೋ ನನಗ್ಯಾಕಯ್ಯ ವಿಶ್, ನಿನ್ನದು ಹೊಸದು ಅಲ್ಲವಾ ಎಂದು ಸಿದ್ದರಾಮಯ್ಯ ನಗುತ್ತಲೇ ಜೊತೆಯಲ್ಲಿ ಕರೆದುಕೊಂಡು ಹೋಗಿ ಮೊಗಸಾಲೆಯಲ್ಲಿ ಕುಳಿತಿದ್ದು ವಿಶೇಷವಾಗಿತ್ತು.
ಈ ನಡುವೆ ಸ್ಪೀಕರ್ ರಮೇಶ್ ಕುಮಾರ್, ಶಾಮನೂರು ಶಿವಶಂಕರಪ್ಪ ಅವರ ಕಾಲಿಗೆ ನಮಸ್ಕರಿಸಿ ಡಿಕೆಶಿ ಆಶೀರ್ವಾದ ಪಡೆದರು. ಡಿಕೆಶಿ ಸುತ್ತುವರಿದ ಕಾಂಗ್ರೆಸ್ ಶಾಸಕರು ವಿಶ್ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದರ ಜೊತೆ ಸಿದ್ದರಾಮಯ್ಯ ಪಕ್ಕದಲ್ಲೇ ಹೆಚ್ಚು ಹೊತ್ತು ಡಿಕೆಶಿ ಕುಳಿತು ಮಾತನಾಡುತ್ತಿದ್ದು ಎಲ್ಲರ ಗಮನ ಸೆಳೆಯಿತು. ಒಟ್ಟಾರೆ ಕೆಪಿಸಿಸಿ ನೂತನ ಸಾರಥಿಯಾದ ಸಂಭ್ರವನ್ನು ಡಿಕೆಶಿ ವಿಧಾನಸಭೆ ಮೊಗಸಾಲೆಯಲ್ಲಿ ಆಚರಿಸಿದ್ದು ವಿಶೇಷವಾಗಿತ್ತು.