ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯದಲ್ಲಿರುವ ಪ್ರತಿಷ್ಠಿತ ಅಲಯನ್ಸ್ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಗಾಂಜಾ ಅಮಲಿನಲ್ಲಿ ಕಾಲೇಜು ಗೇಟ್ ಬಳಿಯೇ ರಂಪಾಟ ಮಾಡಿದ ಘಟನೆ ಶನಿವಾರ ತಡ ರಾತ್ರಿ ನಡೆದಿದೆ.
ಇತ್ತೀಚೆಗಷ್ಟೇ ಅಲಯನ್ಸ್ ಕಾಲೇಜಿನ ಮಾಜಿ ಕುಲಪತಿ ಹತ್ಯೆ ನಡೆದು ಸುದ್ದಿಯಾಗಿದ್ದ ಯುನಿವರ್ಸಿಟಿ ಈಗ ಮತ್ತೆ ಸುದ್ದಿಯಾಗಿದೆ. ಇದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಗಾಂಜಾ ಸೇವನೆ ಮಾಡಿ ರಸ್ತೆಯಲ್ಲಿ ಓಡಾಡುತ್ತಿದ್ದ ಕಾರಿನ ಗಾಜನ್ನು ಪುಡಿ ಮಾಡಿ ರಂಪಾಟ ಮಾಡಿದ್ದಾಳೆ.
ಕಾನೂನು ಪದವಿ ಕಾಲೇಜಿನಲ್ಲಿ ಕಾನೂನಿನ ಬಗ್ಗೆ ವಿದ್ಯಾರ್ಥಿಗಳಿಗೇ ಅರಿವೇ ಇಲ್ಲ ಎನ್ನುವ ರೀತಿ ನಡೆದುಕೊಳ್ಳುತ್ತಿದ್ದಾರೆ. ಈ ರೀತಿ ತಮ್ಮ ಕಾಲೇಜಿನ ವಿದ್ಯಾರ್ಥಿಗಳು ನಡು ರಸ್ತೆಯಲ್ಲೇ ಗಾಂಜಾ, ಮದ್ಯ ಸೇವಿಸಿ ಮೋಜು ಮಸ್ತಿ ಮಾಡುತ್ತಿದ್ದರೂ ಕಾಲೇಜು ಆಡಳಿತ ಮಂಡಳಿ ಮಾತ್ರ ತಮಗೆ ಏನೂ ಗೊತ್ತೇ ಇಲ್ಲ ಎನ್ನವ ರೀತಿ ನಡೆದುಕೊಳ್ಳುತ್ತಿದೆ. ಈ ರೀತಿಯ ಘಟನೆಗಳು ಈ ಕಾಲೇಜಿನಲ್ಲಿ ತುಂಬಾ ಆಗಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕಾಲೇಜು ವಿದ್ಯಾರ್ಥಿಗಳ ಅತಿರೇಕದ ನಡವಳಿಕೆ ಬಗ್ಗೆ ಆನೇಕಲ್ ಪೋಲೀಸ್ ಠಾಣೆಗೆ ಸಾಕಷ್ಟು ದೂರು ಹೋಗಿದ್ದರೂ ಪೊಲೀಸರು ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ಇತ್ತ ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.