– ಸಾವಿನ ಸಂಖ್ಯೆ 290ಕ್ಕೆ ಏರಿಕೆ
ಬೆಂಗಳೂರು: 2 ದಿನಗಳ ಹಿಂದೆ ಶ್ರೀಲಂಕಾ ಪ್ರವಾಸಕ್ಕೆ ತೆರೆಳಿದ್ದ ನೆಲಮಂಗಲ ಮೂಲದ 8 ಮಂದಿಯಲ್ಲಿ ಇಬ್ಬರು ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದು, 6 ಮಂದಿ ನಾಪತ್ತೆಯಾಗಿದ್ದಾರೆ.
ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ನೆಲಮಂಗಲದ ಕೆ.ಜಿ ಹನುಮಂತರಾಯಪ್ಪ ಹಾಗೂ ಎಂ. ರಂಗಪ್ಪ ಸಾವನ್ನಪ್ಪಿದ್ದಾರೆ. ಅಲ್ಲದೆ 6 ಮಂದಿ ಕಾಣೆಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಜೆಡಿಎಸ್ ಮುಖಂಡ ಹನುಮಂತರಾಯಪ್ಪ ಹಾಗೂ ಗುತ್ತಿಗೆದಾರ ರಂಗಪ್ಪ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ ಎಂಬುದನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಬಾಂಬ್ ಸ್ಫೋಟಕ್ಕೆ ಮಂಗ್ಳೂರಿನ ಮಹಿಳೆ ಬಲಿ – ಸಾವಿನ ಸಂಖ್ಯೆ 185ಕ್ಕೆ ಏರಿಕೆ
ಎರಡು ದಿನದ ಹಿಂದೆ ಬೆಂಗಳೂರಿನಿಂದ ಶ್ರೀಲಂಕಾಗೆ ನೆಲಮಂಗಲ ಮೂಲದ ಎಂಟು ಮಂದಿ ಪ್ರವಾಸ ಕೈಗೊಂಡಿದ್ದರು. ಭಾನುವಾರ ಕೊಲಂಬೋದ 8 ಕಡೆಯಲ್ಲಿ ಬಾಂಬ್ ಸ್ಫೋಟವಾಗಿತ್ತು. ಈ ಬಾಂಬ್ ದಾಳಿ ಬಳಿಕ ಶಿವಕುಮಾರ್, ಲಕ್ಷ್ಮಿ ನಾರಾಯಣ, ಮಾರೇಗೌಡ, ಪುಟ್ಟರಾಜು ಸೇರಿ ಒಟ್ಟು 8 ಮಂದಿ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಆದ್ರೆ ಈ 8 ಮಂದಿ ಪೈಕಿ ಇಬ್ಬರು ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಇಲಾಖೆ ಖಚಿತ ಪಡಿಸಿದ್ದು, ನಾಪತ್ತೆಯಾಗಿರುವ ಉಳಿದ 6 ಮಂದಿಯ ಕುಟುಂಬಸ್ಥರು ಆತಂಕಗೊಂಡಿದ್ದಾರೆ.
ಮಂಗಳೂರಿನ ಬೈಕಂಪಾಡಿ ಮೂಲದ ರಝೀನಾ ಖಾದರ್ ಕುಕ್ಕಾಡಿ(58) ಕೂಡ ಸರಣಿ ಬಾಂಬ್ ಸ್ಪೋಟದಲ್ಲಿ ಮೃತಪಟ್ಟಿದ್ದರು. ಕೊಲಂಬೋದಲ್ಲಿ ನೆಲೆಸಿದ್ದ ಬಂಧುಗಳನ್ನು ಭೇಟಿಯಾಗಲೆಂದು ರಝೀನಾ ಪತಿಯೊಡನೆ ಶ್ರೀಲಂಕಾಕ್ಕೆ ತೆರಳಿದ್ದರು. ಅಲ್ಲಿನ ಶಾಂಗ್ರಿಲಾ ಹೊಟೇಲ್ನಲ್ಲಿ ರಝೀನಾ ಇದ್ದರೆ, ಅವರ ಪತಿ ದುಬೈಗೆ ವಿಮಾನದಲ್ಲಿ ಹೊರಟಿದ್ದರು. ಈ ವೇಳೆ ಶಾಂಗ್ರಿಲಾ ಹೊಟೇಲ್ನಲ್ಲಿ ನಡೆದ ಸ್ಫೋಟದಲ್ಲಿ ರಝೀನಾ ಮೃತಪಟ್ಟಿದ್ದರು.
ಈವರೆಗೆ ವರದಿಯಾಗಿರುವ ಪ್ರಕಾರ ಬಾಂಬ್ ಸ್ಪೋಟದಲ್ಲಿ 290 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಶ್ರೀಲಂಕಾ ಪೊಲೀಸರು 24 ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
@SushmaSwaraj
We sadly confirm the deaths of the following two individuals in the blasts yesterday:
– K G Hanumantharayappa
-M Rangappa.
— India in Sri Lanka (@IndiainSL) April 22, 2019