ಬೆಂಗಳೂರು: 15 ವರ್ಷದ ಅಪ್ರಾಪ್ತ ಬಾಲಕ ಕಾರು ಓಡಿಸುತ್ತಾ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಆಟೋ ಚಾಲಕ ಸಾವನ್ನಪ್ಪಿ ಮತ್ತೊಬ್ಬ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಭೂಪಸಂದ್ರ ಬಳಿ ನಡೆದಿದೆ.
ಮಧ್ಯಾಹ್ನದ ಊಟ ಮುಗಿಸಿ ಆಟೋದಲ್ಲಿ ಕುಳಿತಿದ್ದ ಚಾಲಕ ನಾಗರಾಜ್ (47) ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಇಂದು ಸಂಜೆ 4 ಗಂಟೆ ವೇಳೆಯಲ್ಲಿ ಅಪಘಾತ ನಡೆದಿದ್ದು, ಸ್ವಿಫ್ಟ್ ಕಾರು ಚಲಾಯಿಸಿಕೊಂಡು ಬಂದ ಬಾಲಕ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಆಟೋದಲ್ಲಿ ಕುಳಿತಿದ್ದ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇದೇ ವೇಳೆ ಮತ್ತೊಬ್ಬ ಆಟೋ ಚಾಲಕ ಕೂಡ ಆಟೋದಲ್ಲಿ ಇದ್ದರು ಎಂಬ ಮಾಹಿತಿ ಲಭಿಸಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಘಟನೆ ಕಾರಣ ಎನ್ನಲಾಗಿದೆ. ಆಟೋದಲ್ಲಿದ್ದ ಇಬ್ಬರು ಚಾಲಕರು ಕೂಡ ನಾಗಶೆಟ್ಟಿಹಳ್ಳಿ ಮೂಲವರಾಗಿದ್ದಾರೆ.
ಕೆಎ 31 ಎಎ 3298 ಸಂಖ್ಯೆಯ ಸ್ವಿಫ್ಟ್ ಕಾರಿನಲ್ಲಿ ಬಾಲಕ ಬಂದಿದ್ದು, ಕಾರು ಡಿಕ್ಕಿಯಾದ ರಭಸಕ್ಕೆ ಆಟೋ ಸಂಪೂರ್ಣ ಜಖಂಗೊಂಡಿದೆ. ಅಪಘಾತದ ವೇಳೆ ಆಟೋ ಒಳಗೆ ಸಿಲುಕಿಕೊಂಡಿದ್ದ ಮೃತ ದೇಹವನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಅಪಘಾತದ ಕುರಿತು ಮಾಹಿತಿ ಪಡೆದ ಆರ್.ಟಿ.ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಐಪಿಸಿ ಸೆಕ್ಷನ್ 279, 304ಎ, 337 ಅಡಿಯಲ್ಲಿ ಆರ್.ಟಿ.ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.