ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ಹಿರಿಯ ನಾಯಕ ಹಾಗೂ ಪಶ್ಚಿಮ ಬಂಗಾಳ ಸಚಿವ ಸುಬ್ರತಾ ಮುಖರ್ಜಿ ನಿಧನರಾಗಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮುಖರ್ಜಿ ಅವರು ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಹಾರ್: ನಕಲಿ ಮದ್ಯ ಸೇವಿಸಿ 24 ಮಂದಿ ಸಾವು!
75 ವರ್ಷ ವಯಸ್ಸಿನ ಸುಬ್ರತಾ ಮುಖರ್ಜಿ ಅವರು ರಾಜ್ಯ ಪಂಚಾಯತ್ ಸಚಿವರಾಗಿದ್ದರು. ಇವರು ಪತ್ನಿಯನ್ನು ಅಗಲಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿತ್ತು. ಗುರುವಾರ ರಾತ್ರಿ ಹೃದಯ ಸ್ತಂಭನವಾಗಿ ಮೃತಪಟ್ಟಿದ್ದಾರೆ ಎಂದು ಸಚಿವ ಫಿರಾದ್ ಹಕೀಮ್ ತಿಳಿಸಿದ್ದಾರೆ.
“ಅವರು ನಮ್ಮೊಂದಿಗಿಲ್ಲ ಎಂದು ನನಗೆ ಇನ್ನೂ ನಂಬಲಾಗುತ್ತಿಲ್ಲ. ಪಕ್ಷಕ್ಕಾಗಿ ಸಮರ್ಪಣ ಮನೋಭಾವದಿಂದ ಕೆಲಸ ಮಾಡಿದವರು ಮುಖರ್ಜಿ. ವೈಯಕ್ತಿಕವಾಗಿಯೂ ನನಗೆ ನಷ್ಟವಾಗಿದೆ” ಎಂದು ಸಿಎಂ ಮಮತಾ ಬ್ಯಾನರ್ಜಿ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೇದಾರನಾಥದಲ್ಲಿ ಶಂಕರಾಚಾರ್ಯ ಪ್ರತಿಮೆ ಉದ್ಘಾಟಿಸಿದ ಮೋದಿ
ಸುಬ್ರತಾ ಮುಖರ್ಜಿ ಅವರ ಪಾರ್ಥಿವ ಶರೀರವನ್ನು ಸರ್ಕಾರದ ರವೀಂದ್ರ ಸದನ ಸಭಾಂಗಣದಲ್ಲಿ ಇರಿಸಲಾಗಿದ್ದು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉಸಿರಾಟದ ಸಮಸ್ಯೆಯಿಂದ ಮುಖರ್ಜಿ ಅವರು ಅ.24ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯದ ರಕ್ತನಾಳ ಕಟ್ಟಿಕೊಂಡಿದ್ದರಿಂದ ಎರಡು ಸ್ಟಂಟ್ಗಳನ್ನು ಅಳವಡಿಸಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿತ್ತು.