ಬೆಂಗಳೂರು: ವಿಶ್ವ ಹೃದಯ ದಿನಾಚರಣೆ ಅಂಗವಾಗಿ ನಗರದ ತಥಾಗತ್ ಹೃದ್ರೋಗ ಆಸ್ಪತ್ರೆ ವಾಕ್ಥಾನ್ ಮೂಲಕ ಅರಿವು ಮೂಡಿಸುವ ಅಭಿಯಾನ ನಡೆಸಿತು.
ನಗರದ ಫ್ರೀಡಂ ಪಾರ್ಕ್ ನಿಂದ ಮಂತ್ರಿ ಮಾಲ್ ವರೆಗೂ ಕಾಲ್ನಡಿಗೆ ಜಾಥಾದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಫ್ರೀಡಂ ಪಾರ್ಕ್ ನಲ್ಲಿ ಶಾಸಕಿ ಸೌಮ್ಯ ರೆಡ್ಡಿ, ತಥಾಗತ್ ಹಾರ್ಟ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಿ.ಆರ್. ಮಹಾಂತೇಶ್ ವಾಕ್ಥಾನ್ಗೆ ಚಾಲನೆ ನೀಡಿದರು.
ಸೆಪ್ಟೆಂಬರ್ 29 ರಂದು ವಿಶ್ವದಾದ್ಯಂತ ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಅದರ ಭಾಗವಾಗಿ ವಾಕ್ ಥಾನ್ ಹಾಗೂ ಉಚಿತವಾಗಿ ಹೃದಯ ಪರೀಕ್ಷೆ ಹಾಗೂ ಮಧುಮೇಹ ಪರೀಕ್ಷೆ ಮಾಡಲಾಗುತ್ತಿದೆ. ಆರೋಗ್ಯಕ್ಕೆ ಪೂರಕವಾಗಿರುವ ಆಹಾರ ಸೇವಿಸುವುದು, ಚೆನ್ನಾಗಿ ನೀರು ಕುಡಿಯುವುದು, ದಿನನಿತ್ಯ ವ್ಯಾಯಾಮ, ಧೂಮಪಾನ ನಿಲ್ಲಿಸುವುದು, ಸೇರಿದಂತೆ ಕೆಲ ಸಣ್ಣ ಸಣ್ಣ ಬದಲಾವಣೆಗಳು ಪ್ರತಿ ನಿತ್ಯ ಮಾಡಿದರೆ ಸಾಕು ನಮ್ಮ ಆರೋಗ್ಯ ನಾವು ಕಾಪಾಡಬಹದು ಎಂಬ ಸಂದೇಶವನ್ನು ವಿದ್ಯಾರ್ಥಿಗಳು ಅರಿವು ಮೂಡಿಸುತ್ತಿದರು.
ಈ ವೇಳೆ ಮಾತನಾಡಿದ ಶಾಸಕಿ ಸೌಮ್ಯಾರೆಡ್ಡಿ, ಯುವಪೀಳಿಗೆಯಲ್ಲೆ ಅತಿಹೆಚ್ಚು ಹೃದಯದ ಸಮಸ್ಯೆ ಹೆಚ್ಚಾಗುತ್ತಿದೆ. ಈ ಕುರಿತು ಜನರಿಗೆ ಅರಿವು ಮೂಡಿಸಬೇಕು. ಜೀವನ ಕ್ರಮವನ್ನು ಉತ್ತಮಪಡಿಸಬೇಕು. ದೇಹ ದೇಗುಲ ಇದ್ದ ಹಾಗೆ, ಹೃದಯವೇ ಕೆಲಸ ನಿಲ್ಲಿಸಿಬಿಟ್ಟರೆ ಮನುಷ್ಯನಿಲ್ಲ. ಹೀಗಾಗಿ ವಾಯುಮಾಲಿನ್ಯವೂ ಹೃದಯದ ಸಮಸ್ಯೆಗೆ ಕಾರಣವಾಗುತ್ತೆ, ಪರಿಸರ ರಕ್ಷಣೆಯೂ ಜೊತೆ ಜೊತೆಗೆ ನಡೆಯಬೇಕು ಎಂದರು.
ತಥಾಗತ್ ಆಸ್ಪತ್ರೆ ಮುಖ್ಯಸ್ಥರಾದ ಡಾ. ಮಹಂತೇಷ್ ಹಿರೇಮಠ್ ಮಾತನಾಡಿ, ಪ್ರತಿ ವರ್ಷ ವಿಶ್ವ ಹೃದಯ ದಿನದಂದು ಈ ವಾಕ್ ಥಾನ್ ಆಯೋಜಿಸುತ್ತೇವೆ. ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ದೇಶದಲ್ಲಿ ನೂರಕ್ಕೆ ನಲ್ವತ್ತು ಶೇಕಡಾದಷ್ಟು ಜನರು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಡುತ್ತಿದ್ದಾರೆ. ಹೀಗಾಗಿ ಜನರಿಗೆ ಹೃದಯದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜನಜಾಗೃತಿಗಾಗಿ ಈ ವಾಕ್ಥಾನ್ ಆಯೋಜಿಸಿದ್ದು, ಮಂತ್ರಿಮಾಲ್ ಮುಂಭಾಗ ಉಚಿತವಾಗಿ ಹೃದಯದ ಪರೀಕ್ಷೆ ನಡೆಸಲಾಗುವುದು ಎಂದರು.