ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸ್ವಚ್ಛವಾಗಿಡಲು ನಗರದ ಹೊರವಲಯ ಗಬ್ಬು ನಾರುತ್ತಿದೆ. ನಿಮ್ಮ ಕಸ ನಮಗೆ ಬೇಡ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಇಂದು ಬೆಳ್ಳಳಿ ಕಸದ ಕ್ವಾರಿ ಸುತ್ತಮುತ್ತಲಿನ ಜನರು ಪ್ರತಿಭಟನೆ ಮಾಡಿದರು.
ಬೆಂಗಳೂರಿನ ಕೋಗಿಲು ಕ್ರಾಸ್ ಸಮೀಪದಲ್ಲಿರುವ ಬೆಳ್ಳಳಿ ಕಸದ ಕ್ವಾರಿ ಅಲ್ಲಿನ ಜನರನ್ನು ನರಕಕ್ಕೆ ದೂಡುತ್ತಿದೆ. ನಗರದ ಬಹುತೇಕ ಶೇ.70 ರಷ್ಟು ಕಸ ಬೆಳ್ಳಳ್ಳಿ ಕ್ವಾರಿಗೆ ಸುರಿಯಲಾಗುತ್ತಿದೆ. ಪರಿಣಾಮ ಸುತ್ತಮುತ್ತ ಜನರು ಗಬ್ಬುನಾತ, ಸೊಳ್ಳೆ ಮತ್ತು ಕೊಳಚೆ ನೀರಿನ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ಹೀಗಿರುವಾಗ ಜನರ ಅಭಿವೃದ್ಧಿಗಾಗಿ ನೀಡಬೇಕಾದ ಅನುದಾನವನ್ನು ಬಿಜೆಪಿ ಸರ್ಕಾರ ಕಾಂಗ್ರೆಸ್ ಶಾಸಕರು ಇದ್ದಾರೆ ಎಂದು ನೀಡುತ್ತಿಲ್ಲ ಎಂದು ಧರಣಿ ನಡೆಸಿದರು.
ಮಾಜಿ ಸಚಿವ ಕೃಷ್ಣಬೈರೆಗೌಡ ನೇತೃತ್ವದಲ್ಲಿ ಕಾರ್ಪೋರೇಟರ್ ಚೇತನ್ ಸೇರಿದಂತೆ ಹಲವರು ಧರಣಿ ನಡೆಸಿದರು. ದೋಸ್ತಿ ಸರ್ಕಾರ ಕ್ವಾರಿ ಸುತ್ತಲಿನ ಅಭಿವೃದ್ಧಿಗಾಗಿ ನೀಡಿದ 120 ಕೋಟಿ ರೂ ಅನುದಾನ ಕಡಿತಗೊಳಿಸಿದೆ. ಜೊತೆಗೆ ಇತರ 200 ಕೋಟಿ ರೂ. ಅನುದಾನವನ್ನು ರದ್ದು ಮಾಡಿದೆ. ಇದರಿಂದ ಕ್ಷೇತ್ರದ ಜನರ ಜೀವನ ನರಕವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಸುತ್ತಲಿನಿಂದ ನೂರಾರು ಜನರು ಸುರಿಯೋ ಮಳೆಯಲ್ಲೂ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಮತ್ತೊಂದು ಮಂಡೂರು ಮಾಡಲು ನಮ್ಮೂರು ಬಿಡಲ್ಲ ಎಂದು ಜನರು ಉಗ್ರ ಹೋರಾಟ ಮಾಡಿದರು. ಸ್ಥಳಕ್ಕೆ ಘನ ತ್ಯಾಜ್ಯವಿಲೇವಾರಿ ವಿಶೇಷ ಆಯುಕ್ತ ರಂದೀಪ್ ಕರೆಸಿ ಕಸ ಸುರಿಯೊದು ನಿಲ್ಲಿಸಿ ಎಂದು ಆಗ್ರಹಿಸಿದರು.