ಬೆಂಗಳೂರು: ಆನೆ ದಂತ ಮಾರಾಟ ಮಾಡುತ್ತಿದ್ದ ಬೃಹತ್ ಜಾಲ ಪತ್ತೆಯಾಗಿದ್ದು, ಸಿಐಡಿ ಅರಣ್ಯ ಘಟಕದಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ಉಜಿರೆಯ ಎ.ಎಂ ಆಬ್ರಾಹಂ, ಕಣ್ಣೂರಿನ ಸುರೇಶ್ ಬಾಬು ಮತ್ತು ಹಾಸನದ ರಮೇಶ್ ಎಂದು ಗುರುತಿಸಲಾಗಿದೆ. ಉಜಿರೆಯ ತೋಟದ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಬಂಧಿತ ಆರೋಪಿಗಳಿಂದ 51 ಕೆಜಿ ತೂಕದ 10 ಆನೆ ದಂತಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿ ಆಬ್ರಾಹಂ ಕೋವಿಯಿಂದ ಆನೆಗಳನ್ನು ಕೊಂದು ದಂತಗಳನ್ನು ಸಂಗ್ರಹಿಸುತ್ತಿದ್ದ. ಅನೆಗಳನ್ನು ಕೊಂದು ದಂತಗಳನ್ನು ಮಂಗಳೂರಿನ ಅನ್ವರ್ ಎಂಬಾತನ ಮೂಲಕ ಕರಾವಳಿ ಸೇರಿ ಹಲವೆಡೆ ಮಾರಾಟ ಮಾಡುತ್ತಿದ್ದ. ಬಂಧಿತರಿಂದ 10 ಆನೆ ದಂತ, ಒಂದು ಕೋವಿ ಮತ್ತು 8 ಜೀವಂತ ಮದ್ದುಗುಂಡು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಬೆಳ್ತಂಗಡಿ ವಲಯ ಅರಣ್ಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಅನ್ವರ್ ಪರಾರಿಯಾಗಿದ್ದು, ಆರೋಪಿಗಾಗಿ ಶೋಧಕಾರ್ಯ ಮುಂದುವರಿದಿದೆ.