ಆನೇಕಲ್: ಏರಿಯಾಗಳ ಹಂಚಿಕೆ ಹಾಗೂ ಕಲೆಕ್ಷನ್ ಹಣಕ್ಕಾಗಿ ಮಂಗಳಮುಖಿಯರು ಬೀದಿಯಲ್ಲಿ ಬಡಿದಾಡಿಕೊಂಡು ಓರ್ವ ಮಂಗಳಮುಖಿಯನ್ನು ಹಿಗ್ಗಾಮುಗ್ಗಾ ಥಳಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಬೆಂಗಳೂರು ಹೊರವಲಯ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮಂಗಳಮುಖಿ ಕುಮಾರಿ ಕನ್ನಡದವಳಾಗಿದ್ದು ತಮಿಳು ಮಾತನಾಡುವ ಮಂಗಳಮುಖಿಯರು ತಮ್ಮ ಏರಿಯಾದಲ್ಲಿ ಕಲೆಕ್ಷನ್ ಮಾಡದಂತೆ ತಡೆದಿದ್ದಾರೆ. ಜೊತೆಗೆ ಕಲೆಕ್ಷನ್ ಮಾಡಿರುವ ಹಣವನ್ನು ನೀಡುವಂತೆ ಕೇಳಿದ್ದು, ಹಣ ನೀಡಲು ಒಪ್ಪದ ಮಂಗಳಮುಖಿ ಕುಮಾರಿ ಮೇಲೆ ತಮಿಳುನಾಡಿನ ಮಂಗಳಮುಖಿಯರು ಗುಂಪು ಕಟ್ಟಿಕೊಂಡು ಬಂದು ನಡು ರಸ್ತೆಯಲ್ಲಿ ಕಾಲಿನಿಂದ ಒದ್ದು ತಲೆ ಕೂದಲು ಹಿಡಿದು ಎಳೆದಾಡಿ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಇದರ ಜೊತೆಗೆ ಮತ್ತೊಮ್ಮೆ ಈ ಏರಿಯಾದಲ್ಲಿ ಕಲೆಕ್ಷನ್ ಮಾಡಿದರೆ ಆ್ಯಸಿಡ್ ಹಾಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹಲ್ಲೆಗೊಳಗಾದ ಮಂಗಳಮುಖಿ ಕುಮಾರಿ ತಿಳಿಸಿದ್ದಾರೆ. ಸದ್ಯ ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿದವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.