ಬೆಂಗಳೂರು: ಗುರುವಾರ ಹೊರಬಿದ್ದ ಉಪಚುನಾವಣೆ ಫಲಿತಾಂಶ ಪಕ್ಷದಿಂದ ಪಕ್ಷಕ್ಕೆ ನೆಗೆಯುವ ಪಕ್ಷಾಂತರಿಗಳಿಗೆ ಜನ ಹೇಗೆ ಪಾಠ ಕಲಿಸುತ್ತಾರೆ ಅನ್ನೋದಕ್ಕೆ ಒಳ್ಳೆಯ ಉದಾಹರಣೆಯಾಗಿದೆ.
ದೋಸ್ತಿ ಸರ್ಕಾರ ಬೀಳಿಸಿ ಉಪ ಚುನಾವಣೆ ಹೇರಿರುವ ಕರ್ನಾಟಕದ 17 ಮಂದಿ ಅನರ್ಹ ಶಾಸಕರ ಪಾಲಿಗೂ ಇದು ಎಚ್ಚರಿಕೆಯ ಗಂಟೆಯೂ ಹೌದು. ಗುಜರಾತ್ನಲ್ಲಿ ಕಾಂಗ್ರೆಸ್ ಟಿಕೆಟ್ನಿಂದ ಗೆದ್ದು ಶಾಸಕರಾಗಿದ್ದ ಅಲ್ಪೇಶ್ ಠಾಕೂರು ಮತ್ತು ಅವರ ಸ್ನೇಹಿತ ಧವಳ್ ಸಿನ್ಹಾ ಝಲಾ ಬಿಜೆಪಿಗೆ ಜಂಪ್ ಆಗಿದ್ದರು. ಆದರೆ ಉಪ ಚುನಾವಣೆಯಲ್ಲಿ ಸೋತಿದ್ದಾರೆ.
6 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ತನ್ನ ಎರಡು ಸೀಟುಗಳನ್ನು ಉಳಿಸಿಕೊಂಡಿದ್ದಲ್ಲದೇ, ಬಿಜೆಪಿ ಬಳಿಯಿದ್ದ ಒಂದು ಸೀಟನ್ನೂ ಕಸಿದುಕೊಂಡು ಸಿಎಂ ವಿಜಯ್ರೂಪಾನಿಗೆ ಶಾಕ್ ಕೊಟ್ಟಿದೆ. ಮೇನಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಎನ್ಸಿಪಿ ಟಿಕೆಟ್ನಲ್ಲಿ ಗೆದ್ದಿದ್ದ ಉದಯನ್ರಾಜೆ ಭೋಸ್ಲೆ, ಬಿಜೆಪಿಗೆ ಹಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಲ್ಲೇ ಮಹಾರಾಷ್ಟ್ರದ ಸತಾರಾದಿಂದ ಸ್ಪರ್ಧಿಸಿದ್ದರು. ಆದರೆ ಭೋಸ್ಲೆ ನಿನ್ನೆ 87 ಸಾವಿರ ಮತಗಳಿಂದ ಸೋಲು ಅನುಭವಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕಡೇಯ ಕ್ಷಣದಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿಯಿಂದ ಶಿವಸೇನೆ, ಬಿಜೆಪಿಗೆ ಹೋಗಿದ್ದವರಿಗೂ ಸೋಲೇ ಗತಿ ಆಗಿದೆ. ಈ ಚುನಾವಣಾ ಫಲಿತಾಂಶದಿಂದ ಮೈತ್ರಿಗೆ ಕೈಕೊಟ್ಟಿದ್ದ ಕರ್ನಾಟಕದ ಅನರ್ಹ ಶಾಸಕರಿಗೆ ಬಿಗ್ ಶಾಕ್ ನೀಡಿದೆ.