ಬಳ್ಳಾರಿ: ವೈಜ್ಞಾನಿಕವಾಗಿ ನೀರಿಗೆ ಬಣ್ಣವಿಲ್ಲ. ಆದ್ರೆ ಹೈದ್ರಾಬಾದ್ ಕರ್ನಾಟಕ ಅದರಲ್ಲೂ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯದ ನೀರು ಮಾತ್ರ ಹಸಿರು ಬಣ್ಣಕ್ಕೆ ತಿರುಗಿದೆ.
ದಾವಣಗೆರೆ, ಶಿವಮೊಗ್ಗ ಸೇರಿದಂತೆ ಮಲೆನಾಡಿನಲ್ಲಿರುವ ಕಾರ್ಖಾನೆಗಳು ಹೊರಬಿಡುವ ತ್ಯಾಜ್ಯ ನೀರಿನಿಂದಾಗಿ ಜಲಾಶಯದ ಹಿನ್ನೀರಲ್ಲಿ ಮಿಶ್ರಣಗೊಂಡು ಡ್ಯಾಂನಲ್ಲಿರುವ ನೀರು ಕಲುಷಿತಗೊಂಡಿದೆ. ಮುಂಗಾರು ಮಳೆ ಅಭಾವದಿಂದಾಗಿ ಜಲಾಶಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ.
ಇದೇ ಹೊತ್ತಲ್ಲೇ ಬಳ್ಳಾರಿಯಲ್ಲಿ ಕುಡಿಯುವ ನೀರಿನ ಮೂಲವಾಗಿರುವ ಡ್ಯಾಂನಲ್ಲಿರುವ ಅಲ್ಪಸ್ವಲ್ಪ ನೀರು ಕೂಡಾ ಕಲುಷಿತಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದರ ಮಧ್ಯೆ ಡ್ಯಾಂ ಅಧಿಕಾರಿಗಳು ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಡ್ಯಾಂ ನೀರು ಶುಚಿಗೊಳಿಸುವ ಕೆಲಸವನ್ನು ಸರ್ಕಾರ ಮಾಡ್ಬೇಕಿದೆ. ಇಲ್ಲವಾದ್ರೆ ಇದೇ ನೀರನ್ನೇ ಜೀವಜಲ ಎಂದು ನಂಬಿ ಸೇವಿಸುವ ಜನಸಾಮಾನ್ಯರು, ಜಾನುವಾರುಗಳಿಗೆ ತೊಂದರೆಯಾದರೂ ಅಚ್ಚರಿಯಿಲ್ಲ.