ಬಳ್ಳಾರಿ: ಬಿರುಬಿಸಿಲಿನಿಂದ ಕಾದ ಕಬ್ಬಿಣದಂತಾಗಿದ್ದ ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಸಿರಗುಪ್ಪ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಧಾರಾಕಾರವಾಗಿ ಮಳೆ ಸುರಿದಿದೆ.
ಹೊಸಪೇಟೆ ಪಟ್ಟಣದಲ್ಲಿ ರಾತ್ರಿ ಸುಮಾರು ಗಂಟೆಗಳ ಕಾಲ ಮಳೆ ಸುರಿದ ಪರಿಣಾಮ ಬಿಸಿಲಿನಿಂದ ಸುಸ್ತಾಗಿದ್ದ ಜನರು ಮೊದಲ ಮಳೆಯಿಂದ ಪುಳಕಿತರಾಗಿದ್ದಾರೆ. ಅಲ್ಲದೇ ಹಲವಾರು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗಿದ್ದು, ಜನಜೀವನ ಕೆಲವಡೆ ಅಸ್ತವ್ಯಸ್ಥಗೊಂಡಿದೆ.
ಮಳೆ ಗಾಳಿಗೆ ಹೊಸಪೇಟೆ ತಾಲೂಕಿನ ಜಂಭುನಾಥಹಳ್ಳಿಯಲ್ಲಿ ಮನೆಯೊಂದರ ತಗಡಿನ ಶೀಟ್ಗಳು ಹಾರಿದ್ದರಿಂದ ಹಲವರಿಗೆ ಗಾಯವಾಗಿದೆ. ತಗಡಿನ ಶೀಟ್ ಬಡಿದ ಪರಿಣಾಮ ಮೂವರು ಬಾಲಕಿಯರು ಸೇರಿದಂತೆ ಐವರಿಗೆ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು. ಮನೆಯ ಮೇಲ್ಛಾವಣಿಯ ತಗಡುಗಳು ಹಾರಿದ್ದರಿಂದ ಮನೆಯ ಸಾಮಾನುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ.
ಸಿರಗುಪ್ಪ ಪಟ್ಟಣದಲ್ಲೂ ಸಹ ಕೆಲ ಕಾಲ ಮಳೆಯಾದ ಪರಿಣಾಮ ಜನರು ಮಳೆರಾಯನ ಆಗಮನದಿಂದ ಸಂತಸಗೊಂಡಿದ್ದಾರೆ. ಒಟ್ಟಾರೆ ಬೇಸಿಗೆಯ ಆರಂಭದ ದಿನಗಳಲ್ಲೇ ಮಳೆರಾಯನ ಆಗಮನದಿಂದ ಸ್ವಲ್ಪ ಮಟ್ಟಿಗೆ ಸೂರ್ಯನ ಪ್ರತಾಪ ಕಡಿಮೆಯಾದಂತಾಗಿದೆ.