ಬಳ್ಳಾರಿ: ಹಿಂದೆ ಜೈಲಿಗೆ ಹೋದವರನ್ನು ಶಿಕ್ಷೆ ಆಗುವ ಮುಂಚೆ ಬಹಿಷ್ಕರಿಸುತ್ತಿದ್ದರು. ಆದರೆ ಈಗ ಸ್ವಾಗತಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿಕೆಶಿ ವಿರುದ್ಧ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.
ಇಂದು ಬಳ್ಳಾರಿಯಲ್ಲಿ ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟ ವ್ಯವಸ್ಥೆಯಲ್ಲಿ ನಾವಿದ್ದೇವೆ. ಸಮಾಜ ಬದಲಾಗಬೇಕಿದೆ. ಸಮಾಜದಲ್ಲಿನ ವ್ಯವಸ್ಥೆ ಬದಲಾಗಬೇಕು. ಜನರಲ್ಲಿ ಬದಲಾವಣೆ ಬರಬೇಕು ಎಂದು ಹೇಳಿದರು.
ಜನರಲ್ಲಿ ದುರಾಸೆ, ಅಧಿಕಾರದ ಆಸೆ ಜಾಸ್ತಿಯಾಗಿದೆ. ದುಡ್ಡಿದ್ದವರು ಅಧಿಕಾರ ಬೇಕು ಅಂತಾರೆ. ಅಧಿಕಾರದಲ್ಲಿ ಬಂದವರು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಹಿಂದೆ ಜೈಲಿಗೋದವರನ್ನು ಶಿಕ್ಷೆ ಆಗೋ ಮುಂಚೆ ಬಹಿಷ್ಕರಿಸುತ್ತಿದರು. ಆದರೆ ಈಗ ಸ್ವಾಗತಿಸುತ್ತಿದ್ದಾರೆ. ಏಕ ವ್ಯಕ್ತಿ ಪೂಜೆ ಮಾಡಿ ಆದರೆ ಭ್ರಷ್ಟರನ್ನು ಪೂಜೆ ಮಾಡಬಾರದು ಎಂದು ಹೇಳಿ ಪರೋಕ್ಷವಾಗಿ ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಲಿಷ್ಠ ಲೋಕಪಾಲ್ ಬಿಲ್ ಯಾರಿಗೆ ಬೇಕು. ಅಧಿಕಾರದಲ್ಲಿ ಇರೋರು ಎಷ್ಟು ಜನಪ್ರಮಾಣಿಕರು ಇದ್ದಾರೆ. ಈಗ ಲೋಕಾಯುಕ್ತ ಕೂಡ ದುರ್ಬಲವಾಗಿದೆ. ಎಸಿಬಿ ಪೊಲೀಸ್ ವ್ಯವಸ್ಥೆ ಯಲ್ಲಿ ಬರೋ ಸಂಸ್ಥೆ. ಮಂತ್ರಿ ಕೆಳಗೆ ಇರೋ ಎಸಿಬಿ ಏನು ಮಾಡಬಹುದು. ಹೀಗಾದರೆ ಭ್ರಷ್ಟಾಚಾರ ತಡೆಗಟ್ಟುವುದು ಹೇಗೆ ಎಂದು ಪ್ರಶ್ನೆ ಮಾಡಿದರು.