ಬಳ್ಳಾರಿ: ಸಮ್ಮಿಶ್ರ ಸರ್ಕಾರ ಬೀಳಿಸಿ ಹೊಸ ಸರ್ಕಾರ ರಚಿಸಿ ಮಂತ್ರಿಯಾಗಿಯೇ ಬಳ್ಳಾರಿಗೆ ಬರುತ್ತೇನೆ ಎಂದು ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಶಪಥ ಮಾಡಿದ್ದಾರೆ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.
ಲೋಕಸಭಾ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ವೇಳೆ ಶಾಸಕ ನಾಗೇಂದ್ರ ಅವರು, ಸಹೋದರನಿಗೆ ಟಿಕೆಟ್ ಕೇಳಿದ್ದರು. ಆದರೆ ಟಿಕೆಟ್ ಅನ್ನು ಉಗ್ರಪ್ಪ ಅವರಿಗೆ ನೀಡಲಾಗಿತ್ತು. ಬಳಿಕ ತಮಗೆ ಸಚಿವ ಸ್ಥಾನ ನೀಡುವಂತೆ ಕೇಳಿದ್ದರು. ಆಗಲೂ ಹಿನ್ನಡೆಯಾಗಿದ್ದರಿಂದ ಕಾಂಗ್ರೆಸ್ ನಾಯಕರ ವಿರುದ್ಧ ನಾಗೇಂದ್ರ ಅವರು ಕಿಡಿಕಾರಲು ಆರಂಭಿಸಿದ್ದರು.
ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಬಳಿಕವೂ ಸಚಿವ ಸ್ಥಾನ ತಪ್ಪಿದ್ದರಿಂದ ಬೇಸರ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ನಾನು ಸಚಿವ ಸ್ಥಾನವನ್ನು ಪಡೆದೆ ಕ್ಷೇತ್ರಕ್ಕೆ ಮರಳುತ್ತೇನೆ ಎಂದು ಶಾಸಕರು ತಮ್ಮ ಬೆಂಬಲಿಗರಿಗೆ ಹೇಳಿದ್ದರಂತೆ. ಈ ಕಾರಣಕ್ಕೆ ಕಳೆದ ಒಂದು ತಿಂಗಳಿಂದ ನಾಗೇಂದ್ರ ಬಳ್ಳಾರಿ ಹಾಗೂ ತಮ್ಮ ಸ್ವಕ್ಷೇತ್ರಕ್ಕೆ ಭೇಟಿ ನೀಡಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಅಣ್ಣಾ ಮಿನಿಸ್ಟರ್ ಆಗಿಯೇ ಬರುತ್ತಾರೆ. ಸದ್ಯದ ಬೆಳವಣಿಗೆಯಿಂದ ನಾಗೇಂದ್ರ ಅವರ ಶಪಥ ಈಡೇರುತ್ತೆ ಅಂತ ಬೆಂಬಲಿಗರು ಮಾತನಾಡುತ್ತಿದ್ದಾರೆ. ಈ ಮೂಲಕ ಆಪರೇಷನ್ ಕಮಲ ಯಶಸ್ವಿಯಾಗಲು ನಾಗೇಂದ್ರ ಅವರು ಬದ್ಧರಾಗಿದ್ದಾರಾ? ಸಚಿವ ಸ್ಥಾನಕ್ಕಾಗಿ ಮತ್ತೇ ಬಿಜೆಪಿಗೆ ಮರಳುತ್ತಾರಾ ಎನ್ನುವ ಪ್ರಶ್ನೆ ರಾಜಕೀಯ ವಲಯದಲ್ಲಿ ಈಗ ಚರ್ಚೆಯಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv