ಬಳ್ಳಾರಿ: ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಮೇಲೆ ಹಾಕೋದು ಸರಿಯಲ್ಲ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೆಲ್ಲ ಅಕ್ರಮ ಆಸ್ತಿ, ಹಣ ಗಳಿಸಿದ್ದಾರೆಯೋ ಅವರೆಲ್ಲರ ಮನೆ ಮೇಲೆ ಯಾವುದೇ ಸರ್ಕಾರ ಬಂದರೂ ಐಟಿ ದಾಳಿಗಳು ನಿರಂತರವಾಗಿ ನಡೆಯುತ್ತಾನೇ ಇರುತ್ತವೆ. ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲೇ ಕೇಂದ್ರ ಮಾಜಿ ಮಂತ್ರಿಗಳಾಗಿದ್ದ ಸಿದ್ದೇಶಣ್ಣನವರ ಮನೆ ಮೇಲೆಯೂ ದಾಳಿಯಾಯಿತು. ಇಂತಹ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿವೆ. ಆದರೆ ಏನಾದರೂ ತೊಂದರೆಯಾದ ಸಮಯದಲ್ಲಿ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನಿನ್ನೆ ಮೊನ್ನೆ ಮೆಡಿಕಲ್ ಸೀಟು ಹಂಚಿಕೆಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಐಟಿ ದಾಳಿ ಆಗುತ್ತಿದ್ದು, ಅದನ್ನು ಸರ್ಕಾರದ ಮೇಲೆ ಹಾಕುವಂತಹ ಕೆಲಸ ಆಗಬಾರದು. ನ್ಯಾಯಯುತವಾಗಿ ತನಿಖೆ ನಡೆಯಬೇಕು. ತನಿಖೆಗೆ ಎಲ್ಲರೂ ಸಹಕಾರ ಕೊಡಬೇಕು. ತನಿಖೆ ನಡೆದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.
ರಾಮುಲು ಡಿಸಿಎಂ ಆಗಬೇಕೆಂಬ ವಾಲ್ಮೀಕಿ ಶ್ರೀಗಳ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಎಲ್ಲ ಮಠಾಧೀಶರ ಹಾಗೂ ಜನರದ್ದೂ ಬೇಡಿಕೆ ಇದೆ. ಡಿಸಿಎಂ ಪಟ್ಟ ವಿಚಾರವಾಗಿ ಅವರ ಹೇಳಿಕೆಗೆ ನಾನು ಟೀಕೆ ಮಾಡಲ್ಲ. ನಮ್ಮ ಸರ್ಕಾರ, ನಮ್ಮ ನಾಯಕರು ನನ್ನನ್ನು ಗುರುತಿಸುವ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.
https://www.youtube.com/watch?v=4iA6G3B3ozU