– ಜಿಲ್ಲೆಯಲ್ಲಿ ಜನಸಾಮಾನ್ಯರು ಹೈರಾಣ
ಬಳ್ಳಾರಿ: ಜಿಲ್ಲೆ ಹಾಗೂ ಸಂಡೂರು ಭಾಗಗಳಲ್ಲಿ ಹೊರಜಗತ್ತಿಗೆ ಕಾಣುವಂತೆ ಮಾತ್ರ ಗಣಿಗಾರಿಕೆ ನಿಂತಿದೆ. ಆದರೆ ಕೆಲ ಕಂಪನಿಗಳು ಇನ್ನೂ ಗಣಿಗಾರಿಕೆ ನಡೆಸುತ್ತಿದ್ದಾರೆ. ಬಂದಷ್ಟು ಬಾಜಿಕೊಳ್ಳುವ ಉದ್ದೇಶದಿಂದ ಅಪಾರ ಪ್ರಮಾಣದ ಗಣಿಗಾರಿಕೆ ಮಾಡ್ತಿದ್ದು, ಗ್ರಾಮಸ್ಥರು ಕೈಯಲ್ಲಿ ಜೀವ ಹಿಡಿದುಕೊಂಡು ಬದುಕುವ ಸ್ಥಿತಿ ಎದುರಾಗಿದೆ.
ಬಳ್ಳಾರಿ ಸಂಡೂರಿನ ಸುಶೀಲಾ ನಗರದ ರಸ್ತೆಗಳಲ್ಲಿ ಬರೀ ಗುಂಡಿ, ಲಾರಿ ಬಿಟ್ರೆ ಬೇರೆ ವಾಹನ ಓಡಾಡಲು ಸಾಧ್ಯವೇ ಇಲ್ಲ. ಇಂತಹ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡ್ಕೊಂಡು ಜನ ಸಾಗುತ್ತಿದ್ದಾರೆ. ಗಣಿಗಾರಿಕೆಯಿಂದ ಬಳ್ಳಾರಿ ಜಿಲ್ಲೆ ಎಂಬುದು ದೇಶ ವಿದೇಶಗಳ ಭೂಪಟದಲ್ಲಿ ಗುರುತಿಸಿಕೊಂಡಿದ್ದು. ಯಾವಾಗ ಬಳ್ಳಾರಿಯ ಅದಿರಿಗೆ ವಿದೇಶಿ ಮಾರುಕಟ್ಟೆಯಲ್ಲಿ ಬೆಲೆ ಸಿಕ್ಕಿತ್ತೋ ಅಲ್ಲಿಂದ ಆರಂಭವಾದ ಈ ಗಣಿಗಾರಿಕೆ ಇನ್ನೂ ನಿಂತಿಲ್ಲ, ಹೊರ ಜಗತ್ತಿಗೆ ಗಣಿಗಾರಿಕೆ ನಿಂತಿದ್ರೂ, ಈಗಲೂ ರಾಜಾರೋಷವಾಗಿ ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆಯಿಂದ ಇಲ್ಲಿನ ಕೆಲ ಗ್ರಾಮಗಳಲ್ಲಿ ಅಕ್ಷರಶಃ ನರಕಯಾತನೆ ಅನುಭವಿಸ್ತಿದೆ.
ಸಂಡೂರಿನ ಸುಶೀಲಾ ನಗರದ ಸುತ್ತ ಗಣಿಗಾರಿಕೆ ನಡೆಯುತ್ತಿದೆ. ಈ ಗ್ರಾಮದ ಮಧ್ಯದಲ್ಲಿ ಇರೋ ರಸ್ತೆಯಲ್ಲಿ ದಿನ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತೆ. ಇದರಿಂದ ಬರುವ ಧೂಳು ರಸ್ತೆಯ ಪಕ್ಕದಲ್ಲಿ ಇರುವ ಮನೆಯಲ್ಲಿ ವಾಸ ಮಾಡುವ ಜನರ ಬದುಕನ್ನು ಹಾಳು ಮಾಡಿವೆ. ಜಿಂದಾಲ್ ಸೇರಿ ಹಲವಾರು ಕಂಪನಿಗಳು ಗಣಿಗಾರಿಕೆ ನಡೆಸುತ್ತಿವೆ. ಈ ಕಂಪನಿಗಳು ಮುಂಜಾಗ್ರತಾ ಕ್ರಮಗಳನ್ನು ಗಾಳಿಗೆ ತೂರಿ ಗಣಿಗಾರಿಕೆ ನಡೆಸುತ್ತಿವೆ ಹೀಗಾಗಿ. ಇಲ್ಲಿನ ಜನರ ಬದುಕನ್ನು ಬೀದಿಗೆ ತಂದು ನಿಲ್ಲಿಸಿವೆ ಎಂದು ಸ್ಥಳೀಯ ನಿವಾಸಿ ಗೋವಿಂದ ನಾಯಕ್ ತಿಳಿಸಿದ್ದಾರೆ.
ಇಂತಹ ಗಣಿಗಾರಿಕೆಯಿಂದಾಗಿ ಗಣಿ ಸಂಸ್ಥೆಗಳ ಬಗ್ಗೆ ಇಲ್ಲಿ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ಚಿಂತಿತರಾಗಿದ್ದಾರೆ. ಜನ ಪ್ರತಿದಿನ ಸಾಯಿಸುವ ಬದಲು ಒಂದೇ ದಿನ ನಮ್ಮನ್ನು ಕೊಂದು ಬಿಡಿ ಎಂದು ಆಕ್ರೋಶ ಹೊರ ಹಾಕುತ್ತಾರೆ. ಅಲ್ಲದೇ ಈ ಧೂಳಿನಿಂದ ಕೆಲವರು ಈಗಾಗಲೇ ಗ್ರಾಮವನ್ನು ತೊರೆದಿದ್ದು, ಉಳಿದವರು ಪ್ರತಿದಿನ ಹೋರಾಟದ ಬದುಕು ನಡೆಸುತ್ತಿದ್ದಾರೆ.
ಗಣಿಧೂಳಿನಿಂದ ನಿತ್ಯ ನರಕಯಾತನೆ ಅನುಭವಿಸ್ತಿರೋ ಇಲ್ಲಿನ ಜನ್ರ ಬಗ್ಗೆ ಅರಣ್ಯಇಲಾಖೆ, ಜಿಲ್ಲಾಡಳಿತ ಆಗಲಿ ಯಾರು ಸ್ಪಂದಿಸದೇ ಇರುವುದು ವಿಷಾದ ಸಂಗತಿಯಾಗಿದೆ.