ವಾಲ್ಮೀಕಿ ಹಗರಣದ ವಿರುದ್ಧ ಬಿಜೆಪಿಯಿಂದ ಬಳ್ಳಾರಿ ಪಾದಯಾತ್ರೆ – ಛಲವಾದಿ ನಾರಾಯಣಸ್ವಾಮಿ

Public TV
2 Min Read
Chalavadi Narayanaswamy

ಬೆಂಗಳೂರು: ವಾಲ್ಮೀಕಿ ಹಗರಣದ (Valmiki Scam) ವಿರುದ್ಧ ಬಿಜೆಪಿಯಿಂದ (BJP) ಬಳ್ಳಾರಿ ಪಾದಯಾತ್ರೆ ನಡೆಸಲು ಹೈಕಮಾಂಡ್ ಒಪ್ಪಿಗೆ ನೀಡಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಾವೂ ಕೂಡ ವಾಲ್ಮೀಕಿ ಹಗರಣದ ವಿಚಾರದಲ್ಲಿ ಪಾದಯಾತ್ರೆ ಮಾಡುತ್ತೇವೆ. ಹೈಕಮಾಂಡ್ ನಮಗೆ ಸಲಹೆ ನೀಡಿದೆ. ವಾಲ್ಮೀಕಿ ಹಗರಣದಲ್ಲಿ ನಮ್ಮ ಎರಡನೇ ಹಂತದ ಹೋರಾಟ ಶುರುವಾಗಲಿದೆ. ಅದು ಯತ್ನಾಳ್ ಪಾದಯಾತ್ರೆ ಅಂತಲ್ಲ, ನಮ್ಮದೇ ಬಿಜೆಪಿ ಪಾದಯಾತ್ರೆ. ದಿನಾಂಕ ಮತ್ತು ಸ್ವರೂಪವನ್ನು ಬಿಜೆಪಿ ನಾಯಕರೆಲ್ಲ ಕೂತು ಚರ್ಚೆ ಮಾಡುತ್ತೇವೆ. ನಮ್ಮೆಲ್ಲ ಸ್ನೇಹಿತರು ಕೂಡ ವಾಲ್ಮೀಕಿ ಪಾದಯಾತ್ರೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅಧ್ಯಕ್ಷರು ಇದನ್ನು ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.ಇದನ್ನೂ ಓದಿ: ಕೇಂದ್ರದ ತೆರಿಗೆ ಹಂಚಿಕೆ ಅನ್ಯಾಯ ಕುರಿತು ಪಕ್ಕದ ರಾಜ್ಯಗಳಿಗೆ ಪತ್ರ ಬರೆದ ಸಿಎಂ

ಬಳ್ಳಾರಿಗೆ ಪಾದಯಾತ್ರೆ ಮಾಡುತ್ತೇವೆ ಎಲ್ಲಿಂದ ಎನ್ನುವುದೆಲ್ಲಾ ತೀರ್ಮಾನ ಆಗಲಿದೆ. ಮೈಸೂರು ಪಾದಯಾತ್ರೆ ಮುಡಾ (MUDA) ಪಾದಯಾತ್ರೆ ಅಂತಾ ಆಗಿದೆ. ಈಗ ವಾಲ್ಮೀಕಿ ಹಗರಣದ ವಿರುದ್ಧ ಪಾದಯಾತ್ರೆಗೆ ಹೈಕಮಾಂಡ್ ಕೂಡ ಸಮ್ಮತಿ ಸೂಚಿಸಿದೆ. 187 ಕೋಟಿ ರೂ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮದ ಬಗ್ಗೆ ಬಿಜೆಪಿ ಹೋರಾಟ ಮಾಡಿತ್ತು. ಆದರೆ ಮೈಸೂರು ಪಾದಯಾತ್ರೆಯಿಂದ ವಾಲ್ಮೀಕಿ ಅಕ್ರಮದ ಬಗ್ಗೆ ಅಷ್ಟೊಂದು ಸದ್ದು ಆಗಿರಲಿಲ್ಲ ಎಂದು ತಿಳಿಸಿದರು.

ಬಿಜೆಪಿ ಹೋರಾಟ ಮಾಡಿದ ಬಳಿಕ ಸರ್ಕಾರ ಎಚ್ಚೆತ್ತುಕೊಂಡು ಎಸ್‌ಐಟಿ (SIT-Special Investigation Team) ರಚನೆ ಮಾಡಿತ್ತು. ಆರಂಭದಲ್ಲಿ ನಾಗೇಂದ್ರ ಹಾಗೂ ದದ್ದಲ್ ಹೆಸರು ಹೇಳಲಿಲ್ಲ. ಈಗ ಚಾರ್ಜ್ಶೀಟ್‌ನಲ್ಲಿ ನಾಗೇಂದ್ರ ಹೆಸರು ಪ್ರಕರಣದಲ್ಲಿ ಪ್ರಸ್ತಾಪ ಆಗಿದೆ. ನಾವು ಆ ದಿನವೇ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳಬಾರದು ಅಂತಾ ಹೇಳಿದ್ದೇವೆ. ಈಗ ಇಡಿ ನೇರವಾಗಿ ನಾಗೇಂದ್ರ ಮಾಸ್ಟರ್‌ಮೈಂಡ್ ಎಂದು ಹೇಳಿದೆ. ಎಸ್‌ಐಟಿನಲ್ಲಿ ಎಫ್‌ಐಆರ್ (FIR) ಕೂಡ ಹಾಕಿಲ್ಲ. ಈಗ ಸರ್ಕಾರ ಏನು ಹೇಳುತ್ತದೆ. ಇದು ಸಾಮಾನ್ಯ ಹಗರಣ ಅಲ್ಲ. ಇದನ್ನು ಬಹಳ ಲಘುವಾಗಿ ಸರ್ಕಾರ ಪರಿಗಣಿಸಿದೆ ಎಂದಿದ್ದಾರೆ.ಇದನ್ನೂ ಓದಿ: ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ: ಮೀಸಲಾತಿ ರದ್ದು ಮಾಡಲು ಬಿಜೆಪಿ ಬಿಡುವುದಿಲ್ಲ- ಸುನಿಲ್ ಕುಮಾರ್

ಪ್ರಜಾಪ್ರಭುತ್ವ ಅಡಿಯಲ್ಲಿ ಕೆಲಸ ಮಾಡುವ ಮಂತ್ರಿಗಳು ಅಪವಾದ ಬಂದಾಗ ತಕ್ಷಣ ರಾಜೀನಾಮೆ ಕೊಡಬೇಕು. ಈಗ ಮುಖ್ಯಮಂತ್ರಿ ಏನು ಹೇಳ್ತಾರೆ? ಅವರ ಮೇಲೆ ಬಹಳ ಅಪವಾದ ಬಂದಿದೆ. ಹಾಗಾಗಿ ಅವರು ವಿಚಲಿತರಾಗಿದ್ದಾರೆ. ನೇರವಾಗಿ ಅಕೌಂಟಿಗೆ ಹಣ ಹೋಗಿದೆ. ಹಾಗಾಗಿ ಇದು ದೊಡ್ಡ ಅಪವಾದ. ಇದರಿಂದ ದೊಡ್ಡ ಹೋರಾಟ ಶುರುವಾಗಲಿದೆ. ನಮಗೆ ಹೈಕಮಾಂಡ್ ಕೂಡ ಸೂಚನೆ ಕೊಟ್ಟಿದೆ ಎಂದಿದ್ದಾರೆ.

Share This Article