ಬಳ್ಳಾರಿ: ಪೌರತ್ವ ಕಾಯ್ದೆ ಜಾಗೃತಿ ಅಭಿಯಾನ ನಡೆಸಲು ಮಂದಾದ ಬಿಜೆಪಿ ಕಾರ್ಯಕರ್ತರನ್ನು ತಡೆದು ನಿಲ್ಲಿಸಿ ವಾಪಸ್ ಕಳುಹಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಚಲವಾದಿ ಕೇರಿಯಲ್ಲಿ ನಡೆದಿದೆ.
ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ನಲತ್ವಾಡ, ಬಿಜೆಪಿ ಮಹಿಳಾ ಮುಖಂಡೆ ಹಾಗೂ ಕವಿತಾ ಈಶ್ವರ ಸಿಂಗ್ ನೇತೃತ್ವದಲ್ಲಿ ಈ ಅಭಿಯಾನ ನಡೆದಿದೆ. ಇವರು ಚಲುವಾದಿ ಕೇರಿ ದ್ವಾರ ಬಾಗಿಲು ಬಳಿ ಬರುತ್ತಿದ್ದಂತೆಯೇ ವಾರ್ಡ್ ಮುಖಂಡರು ಹಾಗೂ ಯುವಕರು ಕಪ್ಪುಬಟ್ಟೆ ಪ್ರದರ್ಶನ ಗೈದು, ಗೋ ಬ್ಯಾಕ್ ಘೋಷಣೆ ಕೂಗಿ ವಾಪಸ್ ಕಳಹಿಸಿದರು.
ಚಲವಾದಿಕೇರಿ ಪ್ರವೇಶ ದ್ವಾರದಲ್ಲಿ ಸುಮಾರು ಒಂದು ತಾಸುಗಳ ಕಾಲ ಬಿಜೆಪಿ ಕಾರ್ಯಕರ್ತರು, ನಿಂತು ಮನವೊಲಿಸುವ ಪ್ರಯತ್ನ ನಡೆಸಿದರೂ, ಯಾವುದೇ ಪ್ರಯೋಜವಾಗಿಲ್ಲ. ಕೊನೆಗೆ ಬಂದ ದಾರಿಗೆ ಸುಂಕವಿಲ್ಲಬಂತೆ ಮನೆ ಕಡೆ ದಾರಿ ಹಿಡಿದರು.
ಉಪಮುಖ್ಯಮಂತ್ರಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಪೌರತ್ವ ಕಾಯ್ದೆ ಜಾಗೃತಿ ಅಭಿಯಾನಕ್ಕೆ ನಿನ್ನೆ ಅಷ್ಟೇ ಚಾಲನೆ ನೀಡಿದ್ದರು. ಇದರ ಭಾಗವಾಗಿ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಜಾಗೃತಿ ಅಭಿಯಾನ ನಡೆಸಲು ಮುಂದಾಗಿದ್ದರು. ಇದಕ್ಕೆ ತ್ರೀವ ವಿರೋಧವ್ಯಕ್ತಪಡಿಸಿದ ಚಲವಾದಿ ಕೇರಿಯ ಯುವಕರು, ಮುಖಂಡರು, ಪೌರತ್ವ ಕಾಯ್ದೆ ಬಗ್ಗೆ ನಮಗೆ ಅರಿವು ಮೂಡಿಸುವುದು ಬೇಡ. ದಲಿತ-ಹಿಂದುಳಿದ ಅಲ್ಪಸಂಖ್ಯಾತರಿಗೆ ಹೊರ ಹಾಕುವ ಮಸೂದೆ ನಮಗೆ ಬೇಡವೇ ಬೇಡ. ನಮಗೆ ಈಗಾಗಲೇ ಬಾಬಾ ಸಾಹೇಬ್ ಅಂಬೇಡ್ಕರ್ ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನ ನಮಗಿದೆ. ಈ ವಿಚಾರವಾಗಿ ನಮ್ಮ ಏರಿಯಾದಲ್ಲಿ ಜಾಗೃತಿ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿಯುತ್ತಿದಂತೆಯೇ ಸ್ಥಳಕ್ಕೆ ದೌಡಾಯಿಸಿ ಬಂದ ಪೊಲೀಸರು ಪರಿಸ್ಥಿತಿ ನಿಭಾಯಿಸಿ ಗುಂಪು ಚದುರಿಸಿದರು.