– ಕ್ಷುಲ್ಲಕ ಕಾರಣಕ್ಕೆ ಹೊಡೆದು ಕಾಲುವೆಗೆ ಎಸೆದ್ರಾ?
ಬಳ್ಳಾರಿ: ಕಾಂಗ್ರೆಸ್ ಶಾಸಕ ಭೀಮನಾಯ್ಕ್ ಅವರ ಸೋದರ ಅತ್ತೆಯ ಮಗನ ಶವ ಕಾಲುವೆಯಲ್ಲಿ ಪತ್ತೆಯಾಗಿದೆ.
ಹೊಸಪೇಟೆಯ ಮೃತ್ಯುಂಜಯ ನಗರದ ನಿವಾಸಿ ಹಲಗಾ ನಾಯ್ಕ್ ಹಿರಿಯ ಪುತ್ರ 10ನೇ ತರಗತಿಯ ಓದುತ್ತಿದ್ದ ಸುನೀಲ್ (10) ಮೂರು ದಿನದ ಹಿಂದೆ ನಾಪತ್ತೆಯಾಗಿದ್ದು, ಇಂದು ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ದುಷ್ಕರ್ಮಿಗಳು ಹೊಡೆದು ಬಳ್ಳಾರಿಯ ಇಬ್ರಾಹಿಂಪುರ ಕಾಲುವೆ ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಳೆದ ಮೂರು ದಿನಗಳ ಹಿಂದೆ ಟ್ಯೂಷನ್ಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟಿದ್ದ ಸುನೀಲ್ ಮನೆಗೆ ವಾಪಸ್ ಬಂದಿರಲಿಲ್ಲ. ಸಂಜೆ ತನಕ ಹುಡುಕಿ ಮಗ ಸಿಗದೆ ಇದ್ದಾಗ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಇದೇ ತಿಂಗಳು 23 ರಂದು ಸಹಪಾಠಿಗಳ ಜೊತೆಯಲ್ಲಿ ಜಗಳವಾಡಿಕೊಂಡಿದ್ದ ಸುನೀಲ್ ಅನ್ನು ಅವರ ಪಾಲಕರು ಥಳಿಸಿದ್ದರು ಎಂದು ಹೇಳಲಾಗಿದೆ.
ಈ ಕ್ಷುಲ್ಲಕ ಕಾರಣಕ್ಕೆ ಹೊಡೆದು ಕೊಲೆ ಮಾಡಿ ಕಾಲುವೆಗೆ ಹಾಕಿದ್ದಾರೆ ಎಂದು ಸುನೀಲ್ ಕುಮಾರ್ ನಾಯ್ಕ್ ಪೋಷಕರು ಆರೋಪ ಮಾಡಿದ್ದಾರೆ. ಈ ಸಂಬಂಧ ಹೊಸಪೇಟೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.