ಬಳ್ಳಾರಿ: ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನ ಮಾಡಬೇಕು ಎಂಬ ಸರ್ಕಾರದ ನಿರ್ಧಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಇದೀಗ ಅಖಂಡ ಬಳ್ಳಾರಿ ಜಿಲ್ಲೆಯನ್ನ ಉಳಿಸಬೇಕೆಂದು ಆಗ್ರಹಿಸಿ ಮಂಗಳವಾರ ಜಿಲ್ಲೆಯ ಬಂದ್ ಕರೆ ನೀಡಲಾಗಿದೆ.
25ಕ್ಕೂ ಹೆಚ್ಚು ಸಂಘ ಸಂಸ್ಥೆಗಳು, ಸ್ವಾಮೀಜಿಗಳು, ಚೇಂಬರ್ ಆಫ್ ಕಾರ್ಮಸ್ ಬಂದ್ಗೆ ಬೆಂಬಲ ನೀಡಿವೆ. ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಳ್ಳಾರಿ ಸಂಪೂರ್ಣ ಬಂದ್ ಮಾಡಿ ವಿಜಯನಗರ ಜಿಲ್ಲೆ ಸ್ಥಾಪನೆಗೆ ವಿರೋಧಿಸಿ ಪ್ರತಿಭಟನೆ ನಡೆಯಲಿದೆ. ಈಗಾಗಲೇ ಜಿಲ್ಲೆಯ ವಿಭಜನೆಗೆ ಬಿಜೆಪಿ ಶಾಸಕರಾದ ಸೋಮಶೇಖರರೆಡ್ಡಿ, ಕರುಣಾಕರೆಡ್ಡಿ, ಸಚಿವ ಶ್ರೀರಾಮುಲು ವಿರೋಧ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಬಂದ್ಗೆ ತಮ್ಮ ಪರೋಕ್ಷ ಬೆಂಬಲ ಇರುವುದಾಗಿ ಬಿಜೆಪಿ ಶಾಸಕರು ಘೋಷಿಸಿದ್ದಾರೆ. ಹೀಗಾಗಿ ಮಂಗಳವಾರ ಬಳ್ಳಾರಿ ಸಂಪೂರ್ಣ ಬಂದ್ ಆಗಲಿದ್ದು ಅಂಗಡಿ ಮುಗ್ಗಟ್ಟು ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ.
ಹೊಸಪೇಟೆ ಕ್ಷೇತ್ರದ ಅನರ್ಹ ಶಾಸಕ ಆನಂದಸಿಂಗ್ ವಿಜಯನಗರ ಕ್ಷೇತ್ರವನ್ನ ಜಿಲ್ಲಾ ಕೇಂದ್ರವಾಗಿ ಮಾಡಲು ರಾಜೀನಾಮೆ ನೀಡಿ ಕಾಂಗ್ರೆಸ್ನಿಂದ ಹೊರ ನಡೆದಿದ್ದರು. ಆದರೆ ಇವರ ಆಸೆಗೆ ಬಳ್ಳಾರಿ ಜಿಲ್ಲೆಯ ಬಿಜೆಪಿ ಶಾಸಕರಿಂದಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ವಿಜಯನಗರ ಜಿಲ್ಲೆ ಮಾಡಲೇಬಾರದು. ಅಖಂಡ ಬಳ್ಳಾರಿಯನ್ನ ಒಡೆಯಲೇಬಾರದು ಎಂದು ಬಿಜೆಪಿ ಶಾಸಕರು ಸರ್ಕಾರದ ವಿರುದ್ಧವೇ ಸಿಡಿದೇಳುವ ಮೂಲಕ ಆನಂದ್ ಸಿಂಗ್ ಆಸೆಗೆ ತಣ್ಣೀರರೆಚಲು ಮುಂದಾಗಿದ್ದಾರೆ. ಅಲ್ಲದೇ ಜಿಲ್ಲೆ ಮಾಡಲು ರಾಜೀನಾಮೆ ನೀಡೋದಾದ್ರೆ ಜಿಲ್ಲೆ ವಿಭಜನೆ ಮಾಡೋದು ಬೇಡವೆಂದು ಬಿಜೆಪಿ ಶಾಸಕರು ರಾಜೀನಾಮೆ ನೀಡಲು ಸಿದ್ದವೆನ್ನುತ್ತಿದ್ದಾರೆ.