ಬಳ್ಳಾರಿ: ವಿಜಯನಗರ ಜಿಲ್ಲಾ ರಚನೆಗೆ ಬೇಡಿಕೆ ಜೋರಾಗುತ್ತಿದೆ. ಇನ್ನೊಂದೆಡೆ ಅಖಂಡ ಬಳ್ಳಾರಿ ಜಿಲ್ಲೆಗೆ ಆಗ್ರಹಿಸಿ ಹೋರಾಟಗಳು ಸಹ ತೀವ್ರಗೊಂಡಿವೆ. ಈ ಮಧ್ಯೆ ಬಳ್ಳಾರಿ ಜಿಲ್ಲೆಯಿಂದ 6 ತಾಲೂಕುಗಳನ್ನು ಬೇರ್ಪಡಿಸಿ ರಾಜ್ಯ ಸರ್ಕಾರವು ಜಿಲ್ಲೆ ವಿಭಜಿಸಿ ಮ್ಯಾಪ ಸಿದ್ಧಪಡಿಸಿದೆ.
ಭೌಗೋಳಿಕವಾಗಿ ಜಿಲ್ಲೆ ಬೇರ್ಪಡಿಸಿ ಮ್ಯಾಪ ಸಿದ್ಧಪಡಿಸಲಾಗಿದ್ದು, ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟರು, ಹರಪನಹಳ್ಳಿ ಸೇರ್ಪಡೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆ ವ್ಯಾಪ್ತಿಗೆ ಬಳ್ಳಾರಿ, ಸಿರಗುಪ್ಪ, ಕೂಡ್ಲಿಗಿ, ಸಂಡೂರು, ಕುರಗೋಡ್ ತಾಲೂಕುಗಳು ಉಳಿಯಲಿವೆ. ಜಿಲ್ಲೆ ವಿಭಜನೆ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಂದ ವರದಿ ತರೆಸಿಕೊಂಡಿರುವ ಸರ್ಕಾರ ಜಿಲ್ಲೆಯನ್ನು ಬೇರ್ಪಡಿಸಿ ಮ್ಯಾಪ್ ಸಿದ್ಧತೆ ಮಾಡಿದೆ.
ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುವ ಬಳ್ಳಾರಿ ಜಿಲ್ಲಾ ಪ್ರತಿನಿಧಿಗಳ ಸಭೆ ನಂತರ ನೂತನ ಜಿಲ್ಲೆಯ ಮ್ಯಾಪ್ಗೆ ಅಂಗೀಕಾರ ಸಿಗುವ ಸಾಧ್ಯತೆಯಿದೆ. ಒಂದೆಡೆ ಅಖಂಡ ಬಳ್ಳಾರಿ ಜಿಲ್ಲೆ ಉಳಿಯಬೇಕೆಂದು ಶಾಸಕ ಸೋಮಶೇಖರ್ ರೆಡ್ಡಿ, ಕುರಣಾಕರರೆಡ್ಡಿ, ಸಚಿವ ಶ್ರೀರಾಮುಲು ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಅನರ್ಹ ಶಾಸಕ ಆನಂದಸಿಂಗ್, ಕೆಸಿ ಕೊಂಡಯ್ಯ. ಅಲ್ಲಂ ವೀರಭದ್ರಪ್ಪ ಅವರು ವಿಜಯನಗರ ಜಿಲ್ಲೆಯ ರಚನೆ ಆಗಲೇಬೇಕೆಂದು ಸಿಎಂ ಬಿಎಸ್ ವೈ ಮೇಲೆ ಒತ್ತಡ ಹೇರುತ್ತಿದ್ದಾರೆ.
ಜಿಲ್ಲೆ ವಿಭಜನೆ ಬಗ್ಗೆ ಗೊಂದಲ ಉಂಟಾಗಿದ್ದರಿಂದ ಸಿಎಂ ಯಡಿಯೂರಪ್ಪ ಅವರು ಬಳ್ಳಾರಿ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ. ಈ ವೇಳೆ ಜಿಲ್ಲೆ ವಿಭಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.