ಹಾಸನ: ಸಂತ್ರಸ್ತರ ಸಮಸ್ಯೆಗಳನ್ನು ಆಲಿಸುತ್ತಿದ್ದಾಗ ಅಧಿಕಾರಿಗಳನ್ನು ಕರೆಯಲು ಬೆಲ್ ಹೊಡೆದ ವಿಚಾರನ್ನೇ ದೊಡ್ಡದಾಗಿ ಮಾಡಿದರು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಸಂತ್ರಸ್ತರ ಸಮಸ್ಯೆ ಆಲಿಸುವಾಗ ಅಧಿಕಾರಿಗಳನ್ನು ಬೆಲ್ ಹಿಡಿದಿದ್ದನ್ನೇ ದೊಡ್ಡದು ಮಾಡಿದರು. ನೊಂದವರ ಕುರಿತು ವಿಚಾರಿಸಲು ಅಲ್ಲಿಯೇ ಉಳಿದುಕೊಂಡು ಅವರನ್ನು ಮಾತಾಡಿಸಿದ್ದೇನೆ. ಖಾನಾಪೂರದಲ್ಲಿ ಎಲ್ಲ ಮನೆಗಳು ಕುಸಿದಿವೆ. ಹೊಳೆನರಸೀಪುರದಲ್ಲಿ ಸಹ ಪ್ರವಾಹದಿಂದ ಮನೆಗಳ ಹಾನಿಯಾಗಿದೆ. ನಮ್ಮ ಜಿಲ್ಲೆಯಲ್ಲಿ ಮತ್ತು ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಕಣ್ಣಿಂದ ನೋಡಲಾಗದಷ್ಟು ಜನ ಸಂಕಷ್ಟದಲ್ಲಿದ್ದಾರೆ. ಒಂದೆಡೆ ಐದಾರು ಸಾವಿರ ನಿರಾಶ್ರಿತರು ಮತ್ತೊಂದೆಡೆ ಶಾಲಾ ಮಕ್ಕಳನ್ನು ನೋಡಿದರೆ ನೋವಾಗುತ್ತದೆ ಎಂದು ತಿಳಿಸಿದರು.
ಕೆಎಂಎಫ್ ಚುನಾವಣೆ ಬಗ್ಗೆ ಏನೂ ಮಾತನಾಡುವುದಿಲ್ಲ. ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಕುರಿತು ಸಹ ಪ್ರತಿಕ್ರಿಯೆ ನೀಡಲ್ಲ. ಇವತ್ತು ರಾಜಕೀಯ ಮಾತನಾಡುವ ಸಮಯ ಅಲ್ಲ. ಸಂತ್ರಸ್ತರಿಗೆ ಸಾಂತ್ವನ ಹೇಳುವ ಸಮಯ ಎಂದು ಕೆಎಂಎಫ್ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ನಮ್ಮ ಜಿಲ್ಲೆಯ ಹಲವೆಡೆ ಸಮಸ್ಯೆ ಆಗಿದೆ. ಹೊಳೆನರಸೀಪುರದಲ್ಲಿ ಹೊಳೆಗೆ ವಾಲ್ ಮಾಡಿದ್ದು ಸರಿ ಎಂದು ಈಗ ಹೇಳುತ್ತಾರೆ. ಈ ವಾಲ್ ಕಟ್ಟದಿದ್ದರೆ, ಅರ್ಧ ಹೊಳೆ ನರಸೀಪುರ ಕೊಚ್ಚಿ ಹೋಗುತ್ತಿತ್ತು. ಈಗ ಅದನ್ನು ನಿರ್ಮಾಣ ಮಾಡಿದರೆ ಎರಡು ಪಟ್ಟು ಹಣ ಖರ್ಚಾಗುತ್ತದೆ. ಕೂಡಲೇ ತುರ್ತು ಅಧಿವೇಶನ ಕರೆಯಬೇಕು. ರಾಜ್ಯದಲ್ಲಿ ಆಗಿರುವ ಅನಾಹುತಗಳ ಬಗ್ಗೆ ಚರ್ಚೆಯಾಗಬೇಕು. ಒಡಿಶಾ ಚುನಾವಣೆ ಸಂದರ್ಭದಲ್ಲಿ ಪ್ರವಾಹ ಆದಾಗ ಪ್ರಧಾನಿ ನರೇಂದ್ರ ಮೋದಿ ಒಂದು ಲಕ್ಷ ಕೋಟಿ ರೂ. ಘೋಷಣೆ ಮಾಡಿದ್ದರು. ಅದೇ ರೀತಿ ಕೇಂದ್ರ ಸರ್ಕಾರ ಇಲ್ಲಿಗೂ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.