– ಗ್ರಾಮ ತೊರೆಯುತ್ತಿರುವ ಜನರು
ಬೆಳಗಾವಿ: ಒಂದೇ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ಬಂದಿರುವ ಕಾರಣ ಸೊಳ್ಳೆಗಳ ಕಾಟಕ್ಕೆ ಜನರು ಊರು ತೊರೆಯುವ ಸ್ಥಿತಿ ನಿರ್ಮಾಣವಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಟ್ಟಿ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಮಂದಿಗೆ ಡೆಂಗ್ಯೂ ಬಂದಿದ್ದು, ಜನರು ಗ್ರಾಮವನ್ನು ತೊರೆಯುತ್ತಿದ್ದಾರೆ. ಜನ ಗ್ರಾಮ ಬಿಟ್ಟು ಹೋಗುತ್ತಿದ್ದರು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಈ ಗ್ರಾಮದಲ್ಲಿ ಹೆಚ್ಚು ಬಡಕುಟುಂಬಗಳೇ ವಾಸವಿದ್ದು, ಡೆಂಗ್ಯೂ ರೋಗದಿಂದ ಖಾಸಗಿ ಆಸ್ಪತ್ರೆಗಳ ಬಿಲ್ ಪಾವತಿಸಲಾಗದೇ ಪರದಾಡುತ್ತಿದ್ದಾರೆ. ಡೆಂಗ್ಯೂ ಎಂದು ಖಚಿತ ವರದಿ ಬಂದರೂ ಅಲ್ಲಗಳೆಯುತ್ತಿರುವ ತಾಲೂಕು ವೈದ್ಯಾಧಿಕಾರಿಗಳು, ಡೆಂಗ್ಯೂ ಅಂಕಿ ಅಂಶಗಳ ದಾಖಲೆಯಲ್ಲಿ ವಿಫಲರಾಗಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ಅಧಿಕಾರಿಗಳ ಅಸಡ್ಡೆ ನೋಡಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.